ಸುಷ್ಮಾ ಸ್ಥಾನಕ್ಕೆ ಬರಲಿದ್ದಾರೆಯೇ ಈ ಮುಖ್ಯಮಂತ್ರಿ ?

Update: 2017-04-06 17:00 GMT

ಹೊಸದಿಲ್ಲಿ, ಎ. 6 : ಉತ್ತರ ಪ್ರದೇಶದಲ್ಲಿ ಪ್ರಚಂಡ ಜಯಭೇರಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟಕ್ಕೆ ಸರ್ಜರಿ ಮಾಡಲು ಹೊರಟಿದ್ದಾರೆ ಎಂದು ಹೇಳಲಾಗಿದೆ. 

ಇತ್ತೀಚಿಗೆ ಗೋವಾದಲ್ಲಿ ಮುಖ್ಯಮಂತ್ರಿಯಾಗಲು ರಕ್ಷಣಾ ಸಚಿವರ ಹುದ್ದೆಗೆ ಮನೋಹರ್ ಪಾರಿಕ್ಕರ್ ರಾಜೀನಾಮೆ ನೀಡಿದ ಮೇಲೆ ಅದರ ಹೆಚ್ಚುವರಿ ಹೊಣೆಗಾರಿಕೆ ವಿತ್ತ ಸಚಿವ ಅರುಣ್ ಜೇಟ್ಲಿ ಮೇಲೆ ಬಿದ್ದಿದೆ. ಆ ಮಹತ್ವದ ಇಲಾಖೆಗೆ ಪೂರ್ಣ ಕಾಲಿಕ , ಅನುಭವಿ ಸಚಿವರ ನೇಮಕ ಸದ್ಯದ ತುರ್ತು ಅಗತ್ಯ . ಆದರೆ ಮೋದಿ ಅಷ್ಟಕ್ಕೇ ನಿಲ್ಲದೆ ಕೆಲವು ಮಹತ್ವದ ಬದಲಾವಣೆಗಳಿಗೆ ಕೈ ಹಾಕಲಿದ್ದಾರೆ ಎಂದು ವದಂತಿಗಳು ಹರಡಿವೆ. 

ಫೈನಾನ್ಷಿಯಲ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ ಇತ್ತೀಚಿಗೆ ಕಿಡ್ನಿ ವೈಫಲ್ಯದಿಂದಾಗಿ ಚಟುವಟಿಕೆ ಕಡಿಮೆ ಆಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜಾಗಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಬರಲಿದ್ದಾರೆ. ಓಂ ಮಾಥುರ್ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಇದು ಹೌದು ಎಂದಾದರೆ ಇದು ನಿಜಕ್ಕೂ ಬಹುದೊಡ್ಡ ಬದಲಾವಣೆ.   ಗೋವಾ ಮುಖ್ಯಮಂತ್ರಿ ಹುದ್ದೆಗಾಗಿ ಒಂದು ಪ್ರಮುಖ ಸಚಿವನನ್ನು ಕಳಕೊಂಡ ಮೋದಿ ಅವರ ಸಂಪುಟದ ಇನ್ನೊಂದು ಪ್ರಮುಖ ಹುದ್ದೆಗೆ ಪಕ್ಷದ ನಾಯಕರೊಬ್ಬರು ಮುಖ್ಯಮಂತ್ರಿ ಪದವಿ ಬಿಟ್ಟು ಬಂದ ಹಾಗೆ ಆಗುತ್ತದೆ. 

ಸುಷ್ಮಾ ಸ್ವರಾಜ್ ತಮ್ಮ ಕಾರ್ಯ ವೈಖರಿಯ ಮೂಲಕ ಮೋದಿ ಸಂಪುಟದ ನಂಬರ್ ಒನ್ ಸಚಿವೆ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ. ಆದರೆ ಅನಾರೋಗ್ಯದಿಂದಾಗಿ ಅವರಿಗೆ ಆ ಮಹತ್ವದ ಹುದ್ದೆಯಲ್ಲಿ ಮುಂದುವರಿಯಲು ಕಷ್ಟವಾಗಬಹುದು ಎಂಬ ಮಾತುಗಳಿವೆ. ಜೊತೆಗೆ ನೂತನ ರಾಷ್ಟ್ರಪತಿಯಾಗುವವರ ಪಟ್ಟಿಯಲ್ಲೂ ಸುಷ್ಮಾ ಮುಂದಿದ್ದಾರೆ . ಮಹಿಳೆ ಆಗುವುದಿದ್ದರೆ ಬಿಜೆಪಿ ಹಾಗು ಸಂಘ ಪರಿವಾರದ ಪ್ರಥಮ ಆದ್ಯತೆಯ ಅಭ್ಯರ್ಥಿ ಸುಷ್ಮಾ ಎಂದೂ ಹೇಳಲಾಗುತ್ತಿದೆ. ಹಾಗಾಗಿ ವಸುಂಧರಾ ಅವರನ್ನು ಕೇಂದ್ರಕ್ಕೆ ತಂದು ಪಕ್ಷದಲ್ಲಿ ಎರಡನೇ ತಲೆಮಾರಿನ ನಾಯಕತ್ವ ರೂಪಿಸುವುದು ಮೋದಿ ಗುರಿ ಎಂದು ಹೇಳಲಾಗುತ್ತಿದೆ. 

ಉತ್ತರ ಪ್ರದೇಶ ಮುಖ್ಯಮಂತ್ರಿ ಹುದ್ದೆಯನ್ನು  ಕೊನೆಗಳಿಗೆಯಲ್ಲಿ ತಪ್ಪಿಸಿಕೊಂಡ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರಿಗೆ ಸಂಪುಟದಲ್ಲಿ ಭಡ್ತಿ ನೀಡಲು ಮೋದಿ ನಿರ್ಧಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗೆ ೭೫ ವರ್ಷವಾಗಿರುವ ಹಿರಿಯ ನಾಯಕ ಕಲ್ರಾಜ್ ಮಿಶ್ರಾ ಅವರು ಸಂಪುಟದಿಂದ ನಿರ್ಗಮಿಸುವ ಸಾಧ್ಯತೆ ಇದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News