×
Ad

4 ಕೋಟಿ ರೂ. ವೆಚ್ಚದಲ್ಲಿ 8 ಕೆರೆಗಳ ಅಭಿವೃದ್ಧಿ : ಶಾಸಕ ಜೆ.ಆರ್.ಲೋಬೊ

Update: 2017-04-07 21:27 IST

ಮಂಗಳೂರು, ಎ.7: ನಗರದ ಕೆರೆಗಳ ಪೈಕಿ 8 ಕೆರೆಗಳನ್ನು 4 ಕೋ.ರೂ. ವೆಚ್ಚದಲ್ಲಿ ಜಲಸಂಪನ್ಮೂಲ ಮತ್ತು ಅಂತರ್ಜಲ ವೃದ್ದಿ ಅಭಿಯಾನ ಆರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ನಗರದ ವಿವಿಧ ಕಡೆ 5 ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

 ಈ ಕೆರೆಗಳನ್ನು ರಾಜ್ಯ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಪಡೆದು ಪುನರ್ ಬಳಕೆ ಮಾಡಲಾಗುತ್ತಿದೆ. ಹಿಂದೊಮ್ಮೆ ಅತಿಯಾದ ನೀರಿನ ಸಂಪನ್ಮೂಲ ಹೊಂದಿ ಸುಭಿಕ್ಷವಾಗಿದ್ದ ಕೆರೆಗಳು ಕಾಲಕ್ರಮೇಣ ನೀರಿನ ದುರ್ಬಳಕೆಯಿಂದ ಮತ್ತು ಜನರ ಅನಾಸಕ್ತಿಯಿಂದ ಮೂಲ ಕಳೆದುಕೊಂಡವು. ಈಗ ಈ ಕೆರೆಗಳನ್ನು ಪುನರ್ ಬಳಕೆ ಮಾಡಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಲೋಬೋ ತಿಳಿಸಿದರು.

ಜನರಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಅಂತರ್ಜಲವನ್ನು ಹೆಚ್ಚಿಸಿ ಅಗತ್ಯವಿದ್ದಾಗ ಜಾನುವಾರುಗಳಿಗೆ, ಜನರಿಗೆ ಕುಡಿಯಲು ಅನುಕೂಲವಾಗುವಂತೆ ಮಾಡಲಾಗುವುದು. ಕೆರೆಗಳ ಹೂಳು ತೆಗೆದು, ತಡೆಗೋಡೆಗಳನ್ನು ನಿರ್ಮಾಣ ಮಾಡಿ ಜನರು ನಿರಾತಂಕಾವಾಗಿ ಈ ನೀರನ್ನು ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುವುದು ಇದರ ಮೂಲ ಉದ್ದೇಶವಾಗಿದೆ. ಇದರೊಂದಿಗೆ ಇಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುವಂತೆ ಮಾಡಲಾಗುವುದು ಎಂದು ಲೋಬೊ ಹೇಳಿದರು.

ಬೈರಾಡಿಕೆರೆ, ಗುಜ್ಜರಕೆರೆ, ಬಜಾಲ್ ಶಾಂತಿ ನಗರದಲ್ಲಿರುವ ಕುಂಬಳ ಕೆರೆ, ಕೆಂಬಾರ್ ಪ್ರಶಾಂತ ಭಾಗ್‌ನಲ್ಲಿರುವ ಕೆರೆ, ನಿಡ್ಡೇಲ್ ಭಟ್ರಕಟ್ಟ ಬಳಿ ಶಾಶ್ವತ ವಡ್ಡು ನಿರ್ಮಾಣ, ಕದ್ರಿ ಜೋಗಿ ಮಠದ ಬಳಿ ಇರುವ ಕೆರೆ, ಕದ್ರಿ ಕೈಬಟ್ಟಲಿನ ಡಾಕ್ಟರ್ಸ್ ಕಾಲನಿ ಕೆರೆಗಳು ಆರಂಭದಲ್ಲಿ ಪುನರುಜ್ಜೀವನವಾಗಲಿವೆ ಎಂದು ಲೋಬೊ ಹೇಳಿದರು.

ಅಧಿಕಾರಿಗಳಿಗೆ ಸೂಚನೆ:

ಮೊದಲು ಕೆರೆಗಳ ವಿಸ್ತೀರ್ಣವನ್ನು ಗುರುತು ಮಾಡಬೇಕು. ಎಲ್ಲೆಲ್ಲಿ ಒತ್ತುವರಿಯಾಗಿವೆಯೋ ಅವುಗಳನ್ನು ತೆರವು ಮಾಡಬೇಕು. ಕೆರೆಗಳ ನೀರನ್ನು ಕಲುಷಿತ ಮಾಡದಂತೆ ಎಚ್ಚರಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಕೆರೆಗಳನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಿ ಸಾರ್ವಜನಿಕರು ಬಳಕೆ ಮಾಡವಂತೆ ಮಾಡಬೇಕು ಎಂದರು.

ಈ ಸಂದರ್ಭ ಕದ್ರಿ ಜೋಗಿ ಮಠದ ನಿರ್ಮಲಾನಂದ ಸ್ವಾಮೀಜಿ, ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುರ್ರವೂಫ್, ಕಾರ್ಪೊರೇಟರ್‌ಗಳಾದ ಪ್ರಕಾಶ್, ಡಿ.ಕೆ.ಅಶೋಕ್ ಕುಮಾರ್, ಸುಮಯ್ಯಾ, ಎಪಿಎಂಸಿ ಸದಸ್ಯ ಭರತೇಶ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಕಾಂಗ್ರೆಸ್‌ನ ಅಶ್ರಫ್ ಬಜಾಲ್, ಡೆನ್ನಿಸ್, ಕೃತಿನ್, ಅಹ್ಮದ್ ಬಾವಾ ಹಾಗೂ ಸಣ್ಣ ನಿರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News