×
Ad

ಕುಡ್ಲ ಎಕ್ಸ್ ಪ್ರೆಸ್ ಮಾರ್ಗ ವಿಸ್ತರಣೆಗೆ ಮತ್ತೆ ನ್ಯಾಯಾಲಯದ ಮೊರೆಹೋಗಲು ಸಿದ್ಧತೆ

Update: 2017-04-11 20:58 IST

ಮಂಗಳೂರು, ಎ.11: ಮಂಗಳೂರು-ಬೆಂಗಳೂರು ನಡುವೆ ಆರಂಭವಾಗಿರುವ "ಕುಡ್ಲ ಎಕ್ಸ್‌ಪ್ರೆಸ್" ಮಂಗಳೂರು ಜಂಕ್ಷನ್-ಯಶವಂತಪುರ ನಡುವೆ ಓಡುವುದರಿಂದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ "ಕುಡ್ಲ ಎಕ್ಸ್‌ಪ್ರೆಸ್" ರೈಲು ಮಾರ್ಗವನ್ನು ಮಂಗಳೂರು ಸೆಂಟ್ರಲ್‌ ಮತ್ತು ಬೆಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಲು ನ್ಯಾಯಾಲಯದ ಮೊರೆ ಹೋಗಲು ಉಡುಪಿ ರೈಲು ಯಾತ್ರಿಕರ ಸಂಘ ನಿರ್ಧರಿಸಿದೆ.

ಕುಡ್ಲ ಎಕ್ಸ್‌ಪ್ರೆಸ್ ಸಾಕಷ್ಟು ವಿಳಂಬವಾಗಿ ಆರಂಭವಾಗಿದ್ದು, 2015ರಲ್ಲಿ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ಕಾರಣ ಈ ರೈಲು ಮಾರ್ಚ್ ಒಳಗೆ ಆರಂಭಿಸುತ್ತೇವೆ ಎಂದಿದ್ದರು. ಮಂಗಳೂರು ಸೆಂಟ್ರಲ್‌ನಿಂದ -ಬೆಂಗಳೂರು ಸೆಂಟ್ರಲ್‌ಗೆ ಈ ರೈಲು ಓಡಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿತ್ತು. ಆದರೆ ರೈಲ್ವೇ ಅಧಿಕಾರಿಗಳು ಅದನ್ನು ಪರಿಗಣಿಸಲಿಲ್ಲ. ಇದೀಗ "ಕುಡ್ಲ ಎಕ್ಸ್ ಪ್ರೆಸ್ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರದವರೆಗೆ ಹೋಗುತ್ತಿದೆ. ಇದಕ್ಕಾಗಿ ನಾವು ಮತ್ತೆ ಹೈಕೋರ್ಟಿನ ಮೊರೆ ಹೋಗಲು ಸಿದ್ಧರಾಗಿರುವುದಾಗಿ ಉಡುಪಿ ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಪತ್ರಿಕೆಗೆ ತಿಳಿಸಿದ್ದಾರೆ.

"ಕುಡ್ಲ ಎಕ್ಸ್‌ಪ್ರೆಸ್" ಆರಂಭವಾಗುವುದು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ. ಆದರೆ ಇಲ್ಲಿಂದ ಪ್ರಯಾಣಿಕರು ಮಂಗಳೂರು ಕೇಂದ್ರಕ್ಕೆ ಬರುವುದಕ್ಕೆ ಸೂಕ್ತವಾದ ಸಂಪರ್ಕ ವ್ಯವಸ್ಥೆ ಇಲ್ಲ. ಮಂಗಳೂರು ಜಂಕ್ಷನ್ ತಲುಪಲು 100ರಿಂದ 150 ರೂ. ಖರ್ಚು ಮಾಡಬೇಕಾದ ಸ್ಥಿತಿಯೂ ಇದೆ. ಅದೇ ರೀತಿ ಬೆಂಗಳೂರು ಕೇಂದ್ರ ಸ್ಥಾನಕ್ಕೆ ಹೋಗಬೇಕಾದರೆ, ಯಶವಂತಪುರದಿಂದ ಮೆಜೆಸ್ಟಿಕ್ ಗೆ ಬರಬೇಕಾದರೆ ಮತ್ತೆ ಆಟೋಗೆ 150ರಿಂದ 170 ರೂ. ಕೊಡಬೇಕು. "ಕುಡ್ಲ ಎಕ್ಸ್‌ಪ್ರೆಸ್" ರೈಲು ದರ 130 ರೂ. ಆಗಿದ್ದರೂ, 413 ಕಿ.ಮೀ. ದೂರದ ಕ್ರಮಿಸುವ ಈ ಮಾರ್ಗ ದಲ್ಲಿ ಹಿಂದಿಗಿಂತ 3 ಗಂಟೆ ಉಳಿತಾಯವಾದರೂ ಮಂಗಳೂರು ಸೆಂಟ್ರಲ್ ಹಾಗೂ ಬೆಂಗಳೂರು ಸೆಂಟ್ರಲ್ ನಡುವೆ ಓಡದಿರುವುದು "ಕುಡ್ಲ ಎಕ್ಸ್‌ಪ್ರೆಸ್" ಜನಪ್ರಿಯವಾಗದಿರಲು ಪ್ರಮುಖ ಕಾರಣ ಎಂದವರು ಹೇಳಿದರು.

ಕಾರವಾರದಿಂದಲೂ ಕಾನೂನು ಹೋರಾಟ: ಬೆಂಗಳೂರು -ಕಾರವಾರ ನಡುವೆ ಈಗಾಗಲೇ ಸಂಚಾರ ನಡೆಸುತ್ತಿರುವ ರೈಲು ರಾಮನಗರ, ಮೈಸೂರು, ಹಾಸನ ಮಾರ್ಗದಲ್ಲಿ ಹಾದು ಹೋಗುವುದರಿಂದ 18 ಗಂಟೆಗಳ ಹೆಚ್ಚು ಸಮಯ ತಗೆದುಕೊಳ್ಳುತ್ತದೆ.ಇದಕ್ಕೆ ಬದಲಾಗಿ ಕುಣಿಗಲ್ ಮಾರ್ಗವಾಗಿ ಬೆಂಗಳೂರು-ಕಾರವಾರ ನಡುವೆ ಪ್ರತ್ಯೇಕ ರೈಲು ಆರಂಭಿಸಿದರೆ 5 ಗಂಟೆ ಸಮಯ ಉಳಿತಾಯವಾಗುತ್ತದೆ.ಈ ಹಿನ್ನೆಲೆಯಲ್ಲಿ ಬೆಂಗಳೂರು -ಕಾರವಾರ ನಡುವೆ ಕುಣಿಗಲ್ ಮಾರ್ಗವಾಗಿ ಪ್ರತ್ಯೇಕ ರೈಲು ಸಂಚಾರ ಆರಂಭಿಸಲು ಆದೇಶ ನೀಡಲು ಕೋರಿ ಹೈ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಉತ್ತರ ಕನ್ನಡದ ನಿವಾಸಿಯೊಬ್ಬರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ -ಮಂಗಳೂರು ರೈಲ್ವೇ ಅಭಿವೃದ್ಧಿ ಕಾರ್ಪೊರೇಶನ್ ಲಿಮಿಟೆಡ್ ಮತ್ತು ನೈರುತ್ಯ ರೈಲ್ವೇ ಇಲಾಖೆಗೆ ಹೈ ಕೋರ್ಟ್ ವಿಭಾಗೀಯ ಪೀಠ ನೊಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News