ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆ: ಎಚ್ಚರಿಕೆ
Update: 2017-04-14 00:02 IST
ಪುತ್ತೂರು, ಎ.13: ಪುತ್ತೂರು ನಗರಸಭಾ ವ್ಯಾಪ್ತಿಯ ಬಲ್ನಾಡು ಗ್ರಾಮದ ಕುಕ್ಕುತ್ತಡಿ ಎಂಬಲ್ಲಿ 6 ಕುಟುಂಬಗಳು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದೆ. ಇವರಿಗೆ ನಗರಸಭೆ ನಕಲಿ ಮನೆ ಸಂಖ್ಯೆ ನೀಡಿದ್ದು, ಮೆಸ್ಕಾಂ ಸಹ ವಿದ್ಯುತ್ ಸಂಪರ್ಕ ನೀಡಿದೆ. ಆದರೆ ಅದೇ ಪರಿಸರದಲ್ಲಿ ಮೂರು ವರ್ಷಗಳಿಂದ ವಾಸಿಸುತ್ತಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ದೇವಕಿ ಎಂಬವರಿಗೆ ಈ ತನಕ ಮನೆ ಸಂಖ್ಯೆ ಹಾಗೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ದಲಿತ್ ಸೇವಾ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಗಿರಿಧರ್ ನಾಯ್ಕ, 20 ದಿನಗಳೊಳಗಾಗಿ ದೇವಕಿಯವರ ಮನೆಗೆ ಸಂಖ್ಯೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಲಿತ ಸೇವಾ ಸಮಿತಿ ತಾಲೂಕು ಸಮಿತಿ ಸದಸ್ಯರಾದ ಸುರೇಶ್, ಧನಂಜಯ ಬಲ್ನಾಡು, ಮನೋಹರ್ ಮತ್ತು ದೇವಕಿ ಉಪಸ್ಥಿತರಿದ್ದರು.