ಬಾಲ್ಕನಿಯಿಂದ ಬಿದ್ದು ವಾಯುಪಡೆ ಅಧಿಕಾರಿಯ ಸಾವು

Update: 2017-04-16 15:21 GMT

ಕೋಲ್ಕತಾ,ಎ.16: ಕೋಲ್ಕತಾದ ಪೋರ್ಟ್ ವಿಲಿಯಮ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ವಾಯುಪಡೆಯ ವಿಂಗ್ ಕಮಾಂಡರ್ ಎಸ್‌ವಿಆರ್ ಮೂರ್ತಿ (50) ಅವರು ಶನಿವಾರ ರಾತ್ರಿ ಆಫೀಸರ್ಸ್ ಮೆಸ್‌ನ ಎರಡನೇ ಮಹಡಿಯಲ್ಲಿನ ತನ್ನ ಫ್ಲಾಟ್‌ನ ಬಾಲ್ಕನಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಇದೊಂದು ಅಸಹಜ ಸಾವಿನ ಪ್ರಕರಣವಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಜೊತೆಗೆ ವಾಯುಪಡೆಯೂ ತನ್ನದೇ ಆದ ತನಿಖೆಯನ್ನು ನಡೆಸಲಿದೆ ಎಂದು ಐಎಎಫ್ ವಕ್ತಾರರು ತಿಳಿಸಿದರು.

ಮೂರ್ತಿ ಬಾಲ್ಕನಿಯಿಂದ ಯಾವ ಸಮಯಕ್ಕೆ ಕೆಳಕ್ಕೆ ಬಿದ್ದಿದ್ದರು ಎನ್ನುವುದು ಗೊತ್ತಾಗಿಲ್ಲ, ರವಿವಾರ ನಸುಕಿನ ಐದು ಗಂಟೆಯ ವೇಳೆಗೆ ಅವರ ಶವ ಪತ್ತೆಯಾಗಿದೆ. ಹೈದರಾಬಾದ್ ಮೂಲದ ಮೂರ್ತಿ ಪತ್ನಿ,ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಆರು ತಿಂಗಳ ಹಿಂದೆ ಇಲ್ಲಿಗೆ ವರ್ಗವಾಗಿದ್ದ ಅವರು ಫ್ಲಾಟ್‌ನಲ್ಲಿ ಒಂಟಿಯಾಗಿ ವಾಸವಿದ್ದರು. ಅವರ ಕುಟುಂಬ ಹೈದರಾಬಾದ್‌ನಲ್ಲಿ ವಾಸವಾಗಿದೆ.

ಫೋರ್ಟ್ ವಿಲಿಯಮ್ ಸೇನೆಯ ಪೂರ್ವ ಕಮಾಂಡ್‌ನ ಕೇಂದ್ರ ಕಚೇರಿಯಾಗಿದ್ದು, ಇಲ್ಲಿ ವಾಯುಪಡೆಯ ಈಸ್ಟರ್ನ್ ಏರ್ ಕಮಾಂಡ್ ಕೂಡ ಕಾರ್ಯ ನಿರ್ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News