ಅದಾನಿ-ಯುಪಿಸಿಎಲ್: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿವೇತನ ವಿತರಣೆ
ಪಡುಬಿದ್ರೆ, ಎ.16: ಯುಪಿಸಿಎಲ್ ಅದಾನಿ ಫೌಂಡೇಷನ್ನ ಸಹಯೋಗದೊಂದಿಗೆ ಸಿ.ಎಸ್.ಆರ್. ಯೋಜನೆಯಡಿಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಿದ್ದು, ಇಂದು ಶಿಕ್ಷಣ ಕ್ಷೇತ್ರದಲ್ಲಿ ಸ್ಥಾವರದ ಸುತ್ತಮುತ್ತಲಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ಯುಪಿಸಿಎಲ್-ಅದಾನಿ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಮುದರಂಗಡಿ ಚರ್ಚ್ ಸಭಾಂಗಣದಲ್ಲಿ ನಡೆದ ಅದಾನಿ-ಯುಪಿಸಿಎಲ್ನ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಂಪೆನಿಯು ಶಿಕ್ಷಣ, ಆರೋಗ್ಯ, ಉತ್ತಮ ಪರಿಸರ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕಂಪೆನಿಯು ನಾಲ್ಕು ಸರಕಾರಿ ಶಾಲೆಗಳಿಗೆ ಶುದ್ಧ ಕಡಿಯುವ ನೀರಿನ ಯೋಜನೆಯನ್ನು ಕಲ್ಪಿಸಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಲ್ಕಿ ಚರ್ಚ್ನ ಧರ್ಮಗುರು ಕ್ಸೇವಿಯರ್ ಗೋಮ್ಸ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಬೃಹತ್ ಕೈಗಾರಿಕೆಗಳಿದ್ದರೂ, ಸಾಕಷ್ಟು ಸಿಎಸ್ಆರ್ ನಿಧಿಯನ್ನು ವ್ಯಯ ಮಾಡಲಿಲ್ಲ. ಅದಾನಿ ಸಂಸ್ಥೆಯು ದಾಖಲೆ ಪ್ರಮಾಣದ ಸಿಎಸ್ಆರ್ ನಿಧಿಯನ್ನು ಬಳಕೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದೆ. ಗರಿಷ್ಠ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸುವ ಮೂಲಕ ಅದಾನಿ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ವಲಯಕ್ಕೂ ಆದ್ಯತೆ ನೀಡಿದೆ ಎಂದರು.
ಮುದರಂಗಡಿ ಚರ್ಚ್ನ ಧರ್ಮಗರು ಪ್ರಾನ್ಸಿಸ್ ಕ್ಸೇವಿಯರ್ ಲೂಯಿಸ್, ತಾಪಂ ಸದಸ್ಯರಾದ ಕೇಶವ ಮೊಯ್ಲಿ, ದಿನೇಶ್ ಕೋಟ್ಯಾನ್, ರೇಣುಕಾ ಪುತ್ರನ್, ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ, ಎಲ್ಲೂರು ಗ್ರಾಪಂ ಅಧ್ಯಕ್ಷೆ ವಸಂತಿ ಮಧ್ವರಾಜ್, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ, ತೆಂಕ ಅಧ್ಯಕ್ಷೆ ಅರುಣಾ ಕುಮಾರಿ, ಮಜೂರು ಅಧ್ಯಕ್ಷ ಸಂದೀಪ್ ರಾವ್, ಕುತ್ಯಾರು ಅಧ್ಯಕ್ಷ ಧೀರಜ್ ಶೆಟ್ಟಿ, ಕಂಪೆನಿಯ ಎಜಿಎಂ ಗಿರೀಶ್ ನಾವಡ, ಪ್ರಬಂಧಕ ರವಿ ಜೀರೆ ಇದ್ದರು.