ಕದ್ರಿಯ ಜಿಂಕೆ ಪಾರ್ಕ್ನಲ್ಲಿ ಝಗಮಗಿಸುವ ಸಂಗೀತ ಕಾರಂಜಿ: ಪ್ರಾಯೋಗಿಕ ಪ್ರದರ್ಶನ ಯಶಸ್ವಿ
ಮಂಗಳೂರು, ಎ.17: ಕದ್ರಿಯ ಜಿಂಕೆ ಪಾರ್ಕ್ ಎಂದೇ ಗುರುತಿಸಿಕೊಂಡಿರುವ ಹಳೆ ಮೃಗಾಲಯವು ಇದೀಗ ಸಂಗೀತ ಕಾರಂಜಿ ಪಾರ್ಕ್ ಆಗಿ ರೂಪುಗೊಂಡಿದೆ. ಅಲ್ಲೀಗ ಸಂಗೀತದ ಲಯಕ್ಕೆ ಪುಟಿದೇಳುವ ಬಣ್ಣ ಬಣ್ಣ ಸಂಗೀತ ಕಾರಂಜಿ ಪ್ರೇಕ್ಷಕರ ಕಣ್ಮನ ಸೆಳೆಯಲು ಸಿದ್ಧವಾಗಿದೆ. ಸಂಗೀತ ಕಾರಂಜಿ ಹಾಗೂ ಲೇಸರ್ ಬೆಳಕಿನ ಕಣ್ಣುಮುಚ್ಚಾಲಾಟದ ಪ್ರಾಯೋಗಿಕ ಪ್ರದರ್ಶನ ಇಂದು ಯಶಸ್ವಿಯಾಗಿ ನಡೆಯಿತು.
ಸಂಗೀತ ಕಾರಂಜಿಯಲ್ಲಿ ನೀರಿನ ನರ್ತನದ ಜತೆಗೆ ಲೇಸರ್ ಪ್ರದರ್ಶನದ ಮೂಲಕ ಜಿಲ್ಲೆಯ ಇತಿಹಾಸವನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದ್ದು, ಅದರ ಪ್ರಯೋಗವನ್ನು ಇಂದು ಶಾಸಕ ಜೆ.ಆರ್. ಲೋಬೋ ಜತೆ ಮೇಯರ್ ಕವಿತಾ ಸನಿಲ್, ಮೂಡಾ ಆಯುಕ್ತಶ್ರೀಕಾಂತ್ ರಾವ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೀಶ್ ಹಾಗೂ ಮನಪಾದ ಸದಸ್ಯರ ಸಮ್ಮುಖದಲ್ಲಿ ನಡೆಸಲಾಯಿತು.
ಸುಮಾರು 30 ನಿಮಿಷಗಳ ಪ್ರಾಯೋಗಿಕ ಪ್ರದರ್ಶನಕ್ಕೆ ಮೊದಲು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ಸಂಗೀತ ಕಾರಂಜಿಯ ನಿರ್ವಹಣೆ ಕುರಿತಂತೆ ಪರಿಶೀಲನಾ ಸಭೆ ನಡೆಯಿತು. ಶಾಸಕ ಜೆ.ಆರ್. ಲೋಬೋ ಅವರ ಮುತುವರ್ಜಿಯಲ್ಲಿ ಎರಡು ವರ್ಷಗಳ ಹಿಂದೆ ಸಂಗೀತ ಕಾರಂಜಿ ನಿರ್ಮಾಣದ ರೂಪು ರೇಷೆ ಸಿದ್ಧಗೊಂಡಿತ್ತು. ಇದೀಗ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮೂಡಾ)ದಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಹಳೆ ಜಿಂಕೆ ಪಾರ್ಕನ್ನು ಅಭಿವೃದ್ಧಿಪಡಿಸಿ ಅಲ್ಲಿ ಸಂಗೀತ ಕಾರಂಜಿ, ಲೇಸರ್ ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ.
ಜಿಲ್ಲೆಯ ಯಕ್ಷಗಾನ, ಭೂತಾರಾಧನೆ ಹಾಗೂ ಇತರ ಪ್ರಮುಖ ಸಂಸ್ಕೃತಿಗೆ ಪೂರಕವಾದ ಅಂಶಗಳನ್ನು ಈ ಸಂಗೀತ ಕಾರಂಜಿ ಪಾರ್ಕ್ ಪ್ರತಿಬಿಂಬಿಸಲಿದೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂಗೀತ ಪಾರ್ಕ್ ಇರುವಂತೆಯೇ, ಮಂಗಳೂರಿನ ಈ ಪಾರ್ಕ್ಗೆ ರಾಜೀವ ಗಾಂಧಿ ಸಂಗೀತ ಪಾರ್ಕ್ ಹೆಸರನ್ನು ಅಂತಿಮಗೊಳಿಸಲಾಗಿದೆ.