×
Ad

ಅಂತರ್ಜಲ ವೃದ್ಧಿಸುವ ಯೋಜನೆಗಳ ಅನುಷ್ಠಾನವಾಗಲಿ: ಆಸ್ಕರ್

Update: 2017-04-18 20:55 IST

ಮಂಗಳೂರು, ಎ.18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಕೇಂದ್ರ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಅಭಿಪ್ರಾಯಿಸಿದ್ದಾರೆ.

ಬಜ್ಪೆಯ ಮಳವೂರು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳಲ್ಲಿ ಮನೆಗಳಲ್ಲಿ ಮಳೆ ನೀರು ಸಂಗ್ರಹಿಸಿ ಉಪಯೋಗಿಸುವ ಪದ್ಧತಿ ಜಾರಿಯಲ್ಲಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಮಂಗಳೂರು ತಾಲೂಕು ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಂತರ್ಜಲ ವೃದ್ಧಿಸುವ ಯೋಜನೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮಳವೂರಿನ ಕಿಂಡಿ ಅಣೆಕಟ್ಟು ಯೋಜನೆಯಿಂದ ಅಂತರ್ಜಲ ವೃದ್ದಿಗೆ ಪೂರಕವಾಗಲಿದೆ. ಇದರಿಂದ ಸುತ್ತಮುತ್ತಲಿನ ಬೋರ್‌ವೆಲ್ ಹಾಗೂ ತೆರೆದ ಬಾವಿಗಳಲ್ಲೂ ನೀರು ಸಂಗ್ರಹವಾಗಲಿದೆ ಎಂದು ಹೇಳಿದರು.

ಅವಿಭಜಿತ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಸಮುದ್ರ ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವುದು ಹಾಗೂ ಮಳೆ ನೀರನ್ನು ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡುವ ಯೋಜನೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಘೋಷಣೆಯಾಗಿರುವ ಪಶ್ಚಿಮ ವಾಹಿನಿ ಯೋಜನೆಯೂ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಪೂರಕವಾಗಲಿದೆ ಎಂದು ಆಸ್ಕರ್ ಫೆರ್ನಾಂಡಿಸ್ ನುಡಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪಾಂಗಾಳ ಯೋಜನೆ, ಕುಂದಾಪುರ ಯೋಜನೆ ಸೇರಿದಂತೆ ಸಾಕಷ್ಟು ನೀರಿನ ಯೋಜನೆಗಳು ವಿಫಲವಾದ ಕಾರಣ ಇಂತಹ ಬೃಹತ್ ಯೋಜನೆಗಳಿಗೆ ಕೈಹಾಕಲು ಹಿಂದೇಟು ಹಾಕಲಾಗುತ್ತಿತ್ತು. ಇದೀಗ ಮಳವೂರು ಯೋಜನೆ ಸಫಲವಾಗಿರುವುದರಿಂದ ಇಂತಹ ಮತ್ತಷ್ಟು ಯೋಜನೆಗಳ ಅನುಷ್ಠಾನಕ್ಕೆ ಇದು ಪ್ರೇರಣೆ ನೀಡಲಿದೆ ಎಂದವರು ಹೇಳಿದರು.

ನೀರನ್ನು ಮಿತವಾಗಿ ಬಳಸಿ: ಸಚಿವ ರೈ

ಮಳವೂರಿನ ಕಿಂಡಿ ಅಣೆಕಟ್ಟಿನ ನೀರನ್ನು ಸಂಸ್ಕರಿಸಿ ಗ್ರಾಮಗಳ ಜನರಿಗೆ ಸರಬರಾಜು ಮಾಡಲಾಗುತ್ತಿದೆ. ಆ ಕಾರಣದಿಂದ ಗ್ರಾಮಸ್ಥರು ನೀರನ್ನು ಮಿತವಾಗಿ ಬಳಸಬೇಕು. ಮಾತ್ರವಲ್ಲದೆ ಈ ಕುಡಿಯುವ ನೀರನ್ನು ಕೃಷಿಗೆ ಬಳಸಬಾರದು. ಗ್ರಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚನೆಯಾಗುವ ಸಮಿತಿ ನೀರು ದುರ್ಬಳಕೆ ಆಗದಂತೆ ಎಚ್ಚರಿಸುವ ವಹಿಸಬೇಕು ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಲಹೆ ನೀಡಿದರು.

ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜತೆಯಲ್ಲೇ ಇದೀಗ ಕರೋಪಾಡಿ ಯೋಜನೆ 26 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಸಂಗಬೆಟ್ಟು ಯೋಜನೆ 36 ಕೋಟಿ ರೂ. ವೆಚ್ಚದಲ್ಲಿ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಮಾಣಿಯಲ್ಲಿ 16 ಕೋಟಿ ರೂ.ಗಳ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇನ್ನೆರಡು ಯೋಜನೆಗಳು ತಾಂತ್ರಿಕ ಮಂಜೂರಾತಿಗೆ ಬಾಕಿ ಇದೆ. ಉಳಿದಂತೆ ಉಳಾಯಿಬೆಟ್ಟು ಯೋಜನೆ ಅನುಷ್ಠಾನವಾದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವ ರೈ ಈ ಸಂದರ್ಭ ತಿಳಿಸಿದರು.

ಶಾಸಕ ಅಭಯಚಂದ್ರ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಬ್ಲೋಸಂ ಫೆರ್ನಾಂಡಿಸ್, ಎಂ.ಎ. ಗಫೂರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಜಿಪಂ ಸದಸ್ಯರಾದ ವಸಂತಿ ಕಿಶೋರ್, ಯು.ಪಿ. ಇಬ್ರಾಹೀಂ, ತಾಪಂ. ಸದಸ್ಯರಾದ ಸುಪ್ರೀತಾ ಶೆಟ್ಟಿ, ಉಷಾ ಸುವರ್ಣ, ಬಶೀರ್ ಅಹ್ಮದ್, ಪ್ರತಿಭಾ ಶೆಟ್ಟಿ, ಕವಿತಾ ದಿನೇಶ್, ದಿನೇಶ್, ಸುರೇಶ್ ಶೆಟ್ಟಿ, ರೋಜಿ ಮಥಾಯಿಸ್, ಆದಂ, ಸರೋಜಾ, ಪ್ರೆಸಿಲ್ಲಾ ಮೊಂತೆರೋ, ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಮಳವೂರು ಕಿಂಡಿ ಅಣೆಕಟ್ಟು ಉದ್ಘಾಟನೆ ಹಾಗೂ ಪಂಪ್‌ಹೌಸ್ ಹಾಗೂ ಶುದ್ಧೀಕರಣ ಘಟಕಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಸಂಸದ ನಳಿನ್ ಕುಮಾರ್‌ ಕಟೀಲ್ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಪಂಚಾಯತ್‌ನ ಯೋಜನಾ ಸಮನ್ವಯಾಧಿಕಾರಿ ಗೀತಾ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಳವೂರು ಬಹುಗ್ರಾಮ ಯೋಜನೆಯ ಮುಖ್ಯಾಂಶಗಳು

  • ಯೋಜನೆಯಿಂದ 8 ಗ್ರಾಮ ಪಂಚಾಯತ್‌ಗಳ 14 ಗ್ರಾಮಗಳು ಪ್ರಯೋಜನ ಪಡೆಯಲಿವೆ. 8 ಗ್ರಾಮ ಪಂಚಾಯತ್‌ಗಳು (ಬಜಪೆ, ಮಳವೂರು, ಪೆರ್ಮುದೆ, ಮೂಡುಶೆಡ್ಡೆ, ಎಕ್ಕಾರು, ಬಾಳ, ಸೂರಿಂಜೆ, ಜೋಕಟ್ಟೆ). 14 ಗ್ರಾಮಗಳು (ಬಜಪೆ, ಜೋಕಟ್ಟೆ, ಮಳವೂರು, ಕೆಂಜಾರ, ಪೆರ್ಮುದೆ, ಕುತ್ತೆತ್ತೂರು, ಮೂಡುಶೆಡ್ಡೆ, ಪಡುಶೆಡ್ಡೆ,ತ ತೆಂಕ ಎಕ್ಕಾರು, ಬಡಗ ಎಕ್ಕಾರು, ಬಾಳ, ಕಳವಾರು, ಸೂರಿಂಜೆ, ದೇಲಂತಬೆಟ್ಟು.
  • ಒಟ್ಟು ಜನಸಂಖ್ಯೆ- 56,000
  • ಜಲಮೂಲ- ಫಲ್ಗುಣಿ ನದಿ
  • ಕಿಂಡಿ ಅಣೆಕಟ್ಟು- 80 ಕಿಂಡಿಗಳು- 199 ಮೀಟರ್ ಉದ್ದದ ಕಿಂಡಿ ಅಣೆಕಟ್ಟು- 1.25 ಮಿಲಿಯನ್ ಘನ ಮೀಟರ್ ನೀರು ಸಂಗ್ರಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News