×
Ad

ದ.ಕ.: ಶೀಘ್ರವೇ 11 ಗ್ರಾಮಗಳಲ್ಲಿ ಸಾವಯವ ಉತ್ಪನ್ನಗಳ ಔಟ್‌ಲೆಟ್

Update: 2017-04-22 17:26 IST

ಮಂಗಳೂರು, ಎ.22: ಸಾವಯವ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಅಧಿಕೃತವಾಗಿ ಕೃಷಿ ಇಲಾಖೆಯಿಂದ ಗುರುತಿಸಿಕೊಂಡಿರುವ ಸಾವಯವ ಕೃಷಿಕರು ಬೆಳೆದ ಉತ್ಪನ್ನಗಳಿಗೆ ಮಾರಕುಟ್ಟೆ ಒದಗಿಸುವ ನಿಟ್ಟಿನಲ್ಲಿ ಔಟ್‌ಲೆಟ್‌ಗಳು (ಮಳಿಗೆಗಳು) ತೆರೆದುಕೊಳ್ಳಲಿವೆ. ಇದರ ಪ್ರಥಮ ಭಾಗವಾಗಿ ಮಂಗಳೂರು ತಾಲೂಕಿನ ಸೂರಿಂಜೆಯ ಸುಭಿಕ್ಷಾ ಸಾವಯವ ಕೃಷಿಕರ ಸಂಘದ ಸದಸ್ಯರು ಬೆಳೆದ ಉತ್ಪನ್ನಗಳಿಗೆ ಸುರತ್ಕಲ್‌ನಲ್ಲಿ ಒಂದು ತಿಂಗಳೊಳಗೆ ಮಳಿಗೆ ಆರಂಭಗೊಳ್ಳಲಿದೆ.

ಇದಾದ ಬಳಿಕ ಮಂಗಳೂರು ತಾಲೂಕಿನ ಬೋಳಿಯಾರು, ಬಂಟ್ವಾಳದ ರಾಯಿ, ವೀರಕಂಭ, ಪುತ್ತೂರಿನ ಉಪ್ಪಿನಂಗಡಿ, ಕಡಬ, ಅಲಂಗಾರು, ಸುಳ್ಯ ತಾಲೂಕಿನ ಸುಳ್ಯ ಹಾಗೂ ಪಂಜ, ಬೆಳ್ತಂಗಡಿ ನಡ ಮತ್ತು ಕುತ್ಲೂರುಗಳಲ್ಲಿ ಸಾವಯವ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲು ಸಿದ್ಧತೆಗಳು ನಡೆಯುತ್ತಿವೆ.

ಕೃಷಿ ಇಲಾಖೆಯ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲೆಯ 11 ಕ್ಲಸ್ಟರ್‌ಗಳಲ್ಲಿ ಸಾವಯವ ಕೃಷಿ ಪದ್ಧತಿಯಡಿ ರೈತರು ಕೃಷಿ ಉತ್ಪನ್ನಗಳನ್ನು ಬೆಳೆಸುತ್ತಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆಯು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಳೆದ ಮೂರು ವರ್ಷಗಳಿಂದ ಸದ್ದಿಲ್ಲದೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದಡಿ ಈಗಾಗಲೇ ಜಿಲ್ಲೆಯ ಒಟ್ಟು 4200 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ಬೆಳೆಸಲಾಗುತ್ತಿದೆ.

3 ವರ್ಷಗಳ ಪರಿಶೀಲನೆ- ಸರ್ಟಿಫಿಕೇಟ್ ಕಡ್ಡಾಯ!

ಗ್ರಾಮ ಮಟ್ಟದಲ್ಲಿ ಕ್ಲಸ್ಟರ್‌ಗಳ ಮೂಲಕ ಸಾವಯವ ಕೃಷಿಯ ಪರಿಶೀಲನೆ ನಡೆಸುವ ಪ್ರಕ್ರಿಯೆ ಕಳೆದ 3 ವರ್ಷಗಳಿಂದ ಜಾರಿಯಲ್ಲಿದೆ. ಕೃಷಿಕನೊಬ್ಬ ಸಾವಯವ ಪದ್ಧತಿಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವ ಬಗ್ಗೆ ಆತ ಬೆಳೆದ ಉತ್ಪನ್ನಗಳು ಹಾಗೂ ಮಣ್ಣಿನ ಪರೀಕ್ಷೆಯನ್ನು ನಡೆಸಲಾಗುತ್ತದೆ. ರಾಜ್ಯದ ಸಾವಯವ ಕೃಷಿಕರ ಪ್ರಮಾಣನ ಸಂಸ್ಥೆಯಿಂದ ಈ ಪರಿಶೀಲನೆ ನಡೆಯುತ್ತದೆ. ಪರಿಶೀಲನೆಯ ಬಳಿಕ ಅರ್ಹ ಕೃಷಿಕರಿಗೆ ಸಾವಯವ ಬೆಳೆಯ ಬಗ್ಗೆ ಅಧಿಕೃತ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣ ಪತ್ರವು ಹೊಂದಿದ ಕೃಷಿಕರ ಉತ್ಪನ್ನಗಳನ್ನು ಅಧಿಕೃತ ಸಾವಯವ ಬೆಳೆಗಳು ಎಂದು ತೀರ್ಮಾನಿಸಬಹುದಾಗಿದೆ. ಇಂತಹ ಬೆಳೆಗಾರರು ಗ್ರಾಮ ಮಟ್ಟದಲ್ಲಿ ತಮ್ಮ ಸಂಘಗಳ ಮೂಲಕ ಮಳಿಗೆಗಳನ್ನು ಸ್ಥಾಪಿಸಿ ನೇರವಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಬಹುದಾಗಿದೆ ಎಂದು ದ.ಕ. ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಕ ಡಾ. ಕೆಂಪೇಗೌಡ ಹೇಳುತ್ತಾರೆ.

ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಪ್ರಕ್ರಿಯೆಯಡಿ ಜಿಲ್ಲೆಯ 6420 ಕೃಷಿಕರು ನೋಂದಾಯಿಸಿಕೊಂಡಿದ್ದಾರೆ. 2017ರ ಅಂತ್ಯಕ್ಕೆ ಈ ಪ್ರಕ್ರಿಯೆ ಪೂರ್ಣಗೊಂಡು ನೋಂದಾಯಿತ ಕೃಷಿಕರಿಗೆ ಪ್ರಮಾಣ ಪತ್ರ ನೀಡಲಾಗುವುದು. ಈ ಮೂಲಕ ಕೃಷಿಕರು ತಮ್ಮ ಬೆಳೆಗಳನ್ನು ಅಧಿಕೃತ ಸಾವಯವ ಬೆಳೆಗಳಾಗಿ ಮಾರುಕಟ್ಟೆಯಲ್ಲಿ ಧೈರ್ಯದಿಂದ ಮಾರಾಟ ಮಾಡಲು ಸಾಧ್ಯವಾಗಲಿದೆ.

ಈಗಾಗಲೇ ಹಲವಾರು ಕೃಷಿಕರು ಸಾವಯವ ಪದ್ಧತಿಯನ್ನು ಹಲವಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ಏಕಾಏಕಿಯಾಗಿ ಯಾವುದೇ ಬೆಳೆಯನ್ನು ಸಾವಯವ ಕೃಷಿಯೆಂದು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನಿಷ್ಠ ಮೂರರಿಂದ ಐದು ವರ್ಷಗಳು ಅಗತ್ಯ. ಈ ಅವಧಿಯಲ್ಲಿ ಕೃಷಿ ತಜ್ಞರು ಕ್ಷೇತ್ರ ಭೇಟಿ ನೀಡಿ ಮಣ್ಣಿನ ಪರೀಕ್ಷೆ, ಉಪಯೋಗಿಸುವ ಗೊಬ್ಬರ, ಉತ್ಪತ್ತಿಯಾದ ಬೆಳೆಗಳನ್ನು ಪರಿಶೀಲಿಸುತ್ತಾರೆ. ಮಾತ್ರವಲ್ಲದೆ ಕೃಷಿ ಇಲಾಖೆಯು ನೀಡುವ ಮಾರ್ಗದರ್ಶನಗಳನ್ನು ಅನುಸರಿಸಬೇಕು. ಆ ಬಳಿಕವೇ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಅದಕ್ಕಾಗಿ ಈಗಾಗಲೇ ಸಾವಯವ ಕೃಷಿಯನ್ನು ಅನುಸರಿಸುತ್ತಿರುವ ಕೃಷಿಕರು ಕೂಡಾ ಕೃಷಿ ಇಲಾಖೆಯ ಜತೆ ನೋಂದಾಯಿಸಿಕೊಂಡು ತಮ್ಮ ಬೆಳೆಗಳನ್ನು ಅಧಿಕೃತ ಸಾವಯವ ಕೃಷಿಯನ್ನಾಗಿ ಘೋಷಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಕೃಷಿಕರ ಸಹಕಾರ ಅಗತ್ಯ ಎಂದು ಅವರು ಹೇಳುತ್ತಾರೆ.

ಆಯಾ ಪ್ರದೇಶಗಳ ಸಾವಯವ ಉತ್ಪನ್ನಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆಯನ್ನು ಒದಗಿಸುವ ಮೂಲಕ ಸಾವಯವ ಕೃಷಿಗೆ ಉತ್ತೇಜನ ನೀಡುವ ಕಾರ್ಯ ಆಗಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಾವಯವ ಅಕ್ಕಿಯ ಜತೆಗೆ ಮೆಣಸಿಗೆ ರಾಷ್ಟ್ರ ಮಟ್ಟದಲ್ಲಿ ಆದ್ಯತೆ ದೊರೆತಾಗ ಗ್ರಾಹಕರಿಗೆ ನಿಗದಿತ ದರದಲ್ಲಿ ಸಾವಯವ ಉತ್ಪನ್ನಗಳು ಲಭ್ಯವಾಗಲಿವೆ ಎಂದು ಡಾ. ಕೆಂಪೇಗೌಡ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕೆಎಂಎಫ್ ಮಾದರಿಯಲ್ಲಿ ಒಕ್ಕೂಟ ರಚನೆಯ ಚಿಂತನೆ

ಪ್ರಸ್ತುತ ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ಮಧ್ಯವರ್ತಿಗಳಿಂದಾಗಿ ಸೂಕ್ತ ಬೆಲೆಯನ್ನು ಪಡೆಯಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ. ಈ ಸಮಿತಿಯಡಿ ಪ್ರಸ್ತುತ 14 ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿವೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ಒಕ್ಕೂಟಗಳ ಮೂಲಕವೇ ಆಯಾ ಪ್ರದೇಶಗಳಲ್ಲಿ ಬೆಳೆದ ಸಾವಯವ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಿ ಸೂಕ್ತ ಮಾರುಕಟ್ಟೆ ಒದಗಿಸುವ ಮೂಲಕ ಕೃಷಿಕರಿಗೆ ಜತೆಯಲ್ಲೇ ಗ್ರಾಹಕರಿಗೂ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಕೆಎಂಎಫ್ ಮಾದರಿಯಲ್ಲಿ ಒಕ್ಕೂಟ ರಚನೆಯ ಚಿಂತನೆಯೂ ಇದೆ ಎಂದು ಡಾ. ಕೆಂಪೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News