ಸಮಗ್ರ ಕೃಷಿ ಬಗ್ಗೆ ಹೋಬಳಿ ಮಟ್ಟದ ಅಭಿಯಾನ
ಮಂಗಳೂರು, ಎ.22: ದ.ಕ. ಜಿಲ್ಲಾ ಕೃಷಿ ಇಲಾಖೆಯ ವತಿಯಿಂದ ಮೇ ಮೇ 8ರಿಂದ ಹೋಬಳಿವಾರು ಕೃಷಿ ಅಭಿಯಾನವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಕೆಂಪೇಗೌಡ ಮಾಹಿತಿ ನೀಡಿದರು.
ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ರೈತರಿಗೆ ಸಮಗ್ರ ಕೃಷಿ ಮಾಹಿತಿ ನೀಡುವ ನಿಟ್ಟಿನಲ್ಲಿ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಎಂಬ ಶೀರ್ಷಿಕೆಯಡಿ ಅಭಿಯಾನ ನಡೆಯಲಿದೆ. ಪ್ರತಿ ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಎರಡು ದಿನಗಳ ಕಾಲ ಪ್ರಚಾರದ ಜತೆಗೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ತಂಡ ರೈತರೊಂದಿಗೆ ಸಂವಾದ ನಡೆಸಲಿವೆ. ಮೂರನೆ ದಿನ ಅಭಿಯಾನ ಸಮಾರಂಭದ ಜತೆ ನೆಲ ಜಲ ಸಂರಕ್ಷಣೆಯ ಕುರಿತು ಬೀದಿ ನಾಟಕದ ಮೂಲಕ ಗಮನ ಸೆಳೆಯಲಾಗುವುದು ಎಂದು ಅವರು ವಿವರಿಸಿದರು.
ಮಂಗಳೂರು ತಾಲೂಕಿನ ಮಂಗಳೂರು ಎ ಹೋಬಳಿಯಲ್ಲಿ ಮೇ 17ಪರಿಂದ 19, ಸುರತ್ಕಲ್ನಲ್ಲಿ ಮೇ 20ರಿಂದ 22, ಮುಲ್ಕಿಯಲ್ಲಿ ಮೇ 23ರಿಂದ 25, ಮೂಡಬಿದ್ರೆಯಲ್ಲಿ ಮೇ 26ರಿಂದ 28, ಗುರುಪುರದಲ್ಲಿ ಮೇ 26ರಿಂದ 28ರವರೆಗೆ ಅಭಿಯಾನ ನಡೆಯಲಿದೆ.
ಬಂಟ್ವಾಳ ತಾಲೂಕಿನ ಬಂಟ್ವಾಳದಲ್ಲಿ ಮೇ 15ರಿಂದ 17, ಪಾಣೆಮಂಗಳೂರಿನಲ್ಲಿ 18ರಿಂದ 20, ವಿಟ್ಲದಲ್ಲಿ 21ರಿಂದ 23ರವರೆಗೆ, ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿಯಲ್ಲಿ ಮೇ 15ರಿಂದ 17, ವೇಣೂರಿನಲ್ಲಿ ಮೇ 18ರಿಂದ 20, ಕೊಕ್ಕಡದಲ್ಲಿ ಮೇ 21ರಿಂದ 23ರವರೆಗೆ, ಪುತ್ತೂರು ತಾಲೂಕಿನ ಪುತ್ತೂರಿನಲ್ಲಿ ಮೇ 8ರಿಂದ 10, ಉಪ್ಪಿನಂಗಡಿಯಲ್ಲಿ ಮೇ 11ರಿಂದ 13, ಕಡಬದಲ್ಲಿ 14ರಂದ 16ರವರೆಗೆ ಆಗೂ ಸುಳ್ಯ ತಾಲೂಕಿನ ಸುಳ್ಯದಲ್ಲಿ ಮೇ 22ರಿಂದ 24, ಪಂಜದಲ್ಲಿ ಮೇ 25ರಿಂದ 27ರವರೆಗೆ ಕೃಷಿ ಅಭಿಯಾನ ಕೈಗೊಳ್ಳಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಕೃಷಿ ಭಾಗ್ಯ ಯೋಜನೆ
2017-18ನೆ ಸಾಲಿನಗೆ ಕೃಷಿ ಭಾಗ್ಯ ಯೋಜನೆಯನ್ನು ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ಒಳಗೊಂಡು ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳಗಳಲ್ಲಿ ಹೊಂಡ ತೆಗೆದು ಜಲ ಸಂಗ್ರಹಿಸಿ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವಂತೆ ಮಾಡುವುದೇ ಮೂಲ ಕಾರ್ಯಕ್ರಮವಾಗಿರುತ್ತದೆ. ಈ ಯೋಜನೆಯಡಿ ನೀರು ಸಂಗ್ರಹಣಾ ರಚನೆ, ನೀರು ಇಂಗದಂತೆ ತಜೆಯಲು ಪಾಲಿಥೀನ್ ಹೊದಿಕೆ, ಪರ್ಯಾಯ ಮಾದರಿಗಳು, ಹೊಂಡದಿಂದ ನೀರು ಎತ್ತಲು ಡೀಸೆಲ್/ ಸೋಲಾರ್ ಪಂಪ್ಸೆಟ್ ಹಾಗೂ ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ, ಕೃಷಿ ಹೊಂಡದ ಸುತ್ತಲೂ ನೆರಳ ಪರದೆ, ಬದು ನಿರ್ಮಾಣ ಕಾಮಗಾರಿಯನ್ನು, ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆಗಳಡಿ ಅಥವಾ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳುವುದು ಯೋಜನೆಯ ಪ್ರಮುಖ ಸೌಲಭ್ಯಗಳು ಎಂದು ಕೆಂಪೇಗೌಡ ನುಡಿದರು.