ಎ.23ರಿಂದ ಉಡುಪಿ ರಂಗಭೂಮಿ ಆನಂದೋತ್ಸವ
ಉಡುಪಿ, ಎ.22: ಉಡುಪಿ ರಂಗಭೂಮಿ ವತಿಯಿಂದ ಆನಂದೋತ್ಸವ, ಯು.ದುಗ್ಗಪ್ಪ ನುಡಿನಮನ ಹಾಗೂ ರಜಾಮಜಾ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಎ.23 ಮತ್ತು 24ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ.
23ರಂದು ಸಂಜೆ 4:30ಕ್ಕೆ ರಜಾಮಜಾ ಸಮಾರೋಪ ಸಮಾರಂಭ ನಡೆಯ ಲಿದ್ದು, ಬಳಿಕ ಶಿಬಿರಾರ್ಥಿ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಜರಗ ಲಿದೆ. ಸಂಜೆ 6ಗಂಟೆಗೆ ಸಂಸ್ಥೆಯ ಸದಸ್ಯ ಯು.ದುಗ್ಗಪ್ಪ ನುಡಿನಮನದಲ್ಲಿ ಹಿರಿಯ ರಂಗನಟ ಎಂ.ನಂದಕುಮಾರ್ ಸಂಸ್ಮರಣೆ ಮಾಡಲಿರುವರು. ಸಂಜೆ 6:15ಕ್ಕೆ ಆನಂದೋತ್ಸವವನ್ನು ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು. ಬಳಿಕ ಅನನ್ಯ ಬೆಂಗಳೂರು ತಂಡದಿಂದ ಸೇತುರಾಮ್ ನಿರ್ದೇಶನದ ‘ಅತೀತ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
24ರಂದು ಸಂಜೆ 6ಗಂಟೆಗೆ ಹಿರಿಯ ರಂಗಕರ್ಮಿ ಪಿ.ವಾಸುದೇವ್ ರಾವ್ ಅವರಿಗೆ 2016ನೆ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ನಂತರ ಬೆಂಗಳೂರು ನಟರಂಗ ತಂಡದಿಂದ ವಿದ್ಯಾ ಕಾರಂತ್ ನಿರ್ದೇಶನದ ‘ಕಂಚುಕಿ’ ನಾಟಕ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಜತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ., ನಂದಕುಮಾರ್, ಭಾಸ್ಕರ್ರಾವ್ ಕಿದಿಯೂರು ಉಪಸ್ಥಿತರಿದ್ದರು.