ರಸ್ತೆಬದಿ ಚರಂಡಿಗೆ ಬಿದ್ದ ಕಾರು: ವಿದ್ಯಾರ್ಥಿನಿ ಮೃತ್ಯು

Update: 2017-04-24 11:58 GMT

ಕಾಸರಗೋಡು, ಎ.24: ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರು ರಸ್ತೆಬದಿಯ ಚರಂಡಿಗೆ ಬಿದ್ದು, ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಸೋಮವಾರ  ಮುಂಜಾನೆ ಬದಿಯಡ್ಕದಲ್ಲಿ  ನಡೆದಿದೆ.

ಮೃತಪಟ್ಟ ವಿದ್ಯಾರ್ಥಿನಿಯನ್ನು ಬೇಳ ಬಂಟರಡ್ಕದ ಶೇಷಪ್ಪ ನಾಯ್ಕ್- ಸರಸ್ವತಿ ದಂಪತಿ ಪುತ್ರಿ  ಅರ್ಪಿತಾ (17) ಎಂದು ಗುರುತಿಸಲಾಗಿದೆ. ಈಕೆ ಬದಿಯಡ್ಕ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹಯರ್ ಸೆಕಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿಯಾಗಿದ್ದಳು.

ಪುತ್ತೂರು ಕುಂಬ್ರ ಬೊಲಾಡ್‌ ನ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ತೆರಳಿ ಮರಳುತ್ತಿದ್ದಾಗ ಬದಿಯಡ್ಕ ಪೊಲೀಸ್ ಠಾಣಾ ಮುಂಭಾಗದಲ್ಲಿ ಈ ಅಪಘಾತ ನಡೆದಿದೆ. ಶೇಷಪ್ಪ ನಾಯ್ಕರ ಪತ್ನಿ ಸರಸ್ವತಿ, ಮಕ್ಕಳಾದ ಅಜಯ ಕುಮಾರ್, ಅರ್ಪಿತಾ ರವಿವಾರ ಕುಂಬ್ರ ಬೊಲಾಡ್‌ಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ  ತಡರಾತ್ರಿ ಎರಡು ಗಂಟೆ ಸುಮಾರಿಗೆ ಊರಿಗೆ ಪ್ರಯಾಣ ಬೆಳೆಸಿದ್ದರು.

ಬದಿಯಡ್ಕ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಬದಿಯ ಚರಂಡಿಗೆ ಬಿದ್ದಿದೆ. ವ್ಯಾನ್ ನ ಬಾಗಿಲು ತೆರೆಯಲ್ಪಟ್ಟು ಅರ್ಪಿತಾ ಹೊರಗಡೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿತ್ತು. ವ್ಯಾನ್ ನಲ್ಲಿದ್ದ  ಸರಸ್ವತಿ, ಸಹೋದರ ಅಜಯ್ ಕುಮಾರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕೂಡಲೇ ಅರ್ಪಿತಾಳನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಳು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News