ವಿಟಿಯು ಪಠ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ: ಡಾ. ಕರಿಸಿದ್ದಪ್ಪ
ಮೂಡುಬಿದಿರೆ, ಎ.24: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮವನ್ನು ನಿರಂತರವಾಗಿ ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಉದ್ಯೋಗ ಮಾರುಕಟ್ಟೆಗೆ ಸೂಕ್ತವಾದ ಅಭ್ಯರ್ಥಿಗಳನ್ನು ತಯಾರು ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಮುಂದಿನ ದಿನಗಳಲ್ಲಿ ಕೌಶಲ್ಯಾಭಿವೃದ್ಧಿಯು ವಿಟಿಯು ಪಠ್ಯಕ್ರಮದ ಅಂಗವಾಗಲಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಬೋಧಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಸಮಾಲೋಚನೆಗಳನ್ನು ಕೈಗೊಂಡು ಮುಂದುವರಿಯಬೇಕು ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕರಿಸಿದ್ದಪ್ಪ ಹೇಳಿದರು.
ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಆಯೋಜಿಸಲ್ಪಟ್ಟ ಕೌಶಲ 2017 ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ .ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವಿಟಿಯು ಕೌಶಲ್ಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಎಸ್. ಜೆ . ಅಮಲನ್ ಕೌಶಲ್ಯ ಪಠ್ಯಕ್ರಮದ ಕುರಿತಾಗಿ ನಡೆಸಿದ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ವಾಚಿಸಿದರು. ಮುಂಬೈ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ನ ಶ್ರೀನಿವಾಸನ್, ಟ್ರಸ್ಟಿ ವಿವೇಕ್ ಆಳ್ವ , ಪ್ರಾಂಶುಪಾಲ ಡಾ. ಪೀಟರ್ ಪೆರ್ನಾಂಡಿಸ್ , ಕಾರ್ಯಕ್ರಮ ಸಂಯೋಜಕ ಎಂಬಿಎ ಡೀನ್ ಪ್ರೊ. ಪಿ. ರಾಮಕೃಷ್ಣ ಚಡಗ ಮತ್ತು ವಿಟಿಯು ಗೌವರ್ನಿಂಗ್ ಕೌನ್ಸಿಲ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು
ಸಮಾರಂಭದಲ್ಲಿ ಡಾ. ಕರಿಸಿದ್ದಪ್ಪರನ್ನು ಗೌರವಿಸಲಾಯಿತು. ಗುರುದತ್ ಸೋಮಯಾಜಿ ಅತಿಥಿಗಳನ್ನು ಪರಿಚಯಿಸಿದರು. ಶ್ರುತಿ ಕುಮಾರಿ ನಿರೂಪಿಸಿದರು. ಡಾ.ಗುರು ಆರಾಧ್ಯ ವಂದಿಸಿದರು.