ಕರ್ನಾಟಕ ರಾಜ್ಯ ಮಾದರಿಯಲ್ಲಿ 2020ಕ್ಕೆ ಇಂಧನ ಸ್ವತಂತ್ರ್ಯ ಭಾರತ ನಿರ್ಮಾಣ: ಪ್ರೊ.ಹಂದೆ
ಅಮಾಸೆಬೈಲು, ಎ.27: ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಕರ್ನಾಟಕ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಮಾದರಿಯ ಮೂಲಕ 2020ರ ವೇಳೆಗೆ ಭಾರತವು ‘ಶಕ್ತಿಯ ಉತ್ಪಾದನೆಯಲ್ಲಿ ಸ್ವತಂತ್ರ್ಯ’ ದೇಶ ಆಗಬೇಕು ಎಂದು ಪ್ರತಿಷ್ಠಿತ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಸೆಲ್ಕೊ ಇಂಡಿಯಾದ ಅಧ್ಯಕ್ಷ ಡಾ.ಎಚ್.ಹರೀಶ್ ಹಂದೆ ಹೇಳಿದ್ದಾರೆ.
ಅಮಾಸೆಬೈಲು ಗ್ರಾಪಂ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಕರ್ಣಾಟಕ ಬ್ಯಾಂಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ನವೀ ಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಉಡುಪಿ ಜಿಲ್ಲಾಡಳಿತ, ಜಿಪಂ ಮತ್ತು ಕುಂದಾಪುರ ತಾಪಂಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾದ ಅಮಾಸೆಬೈಲು ಗ್ರಾಪಂನಲ್ಲಿ ಅನುಷ್ಠಾನಗೊಂಡಿರುವ ಸೋಲಾರ್ ಗ್ರಾಮ ಘೋಷಣೆ ಸಮಾ ರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಸೌರಶಕ್ತಿ ಬಳಕೆಯಲ್ಲಿ ಒರಿಸ್ಸಾ, ಬಿಹಾರ್, ಗುಜರಾತ್, ಈಶಾನ್ಯ ರಾಜ್ಯಗಳು ಕರ್ನಾಟಕ ಮಾದರಿಯನ್ನು ಅನುಸರಿಸುತ್ತಿವೆ. ಮುಂದಿನ ಐದು ವರ್ಷಗಳಲ್ಲಿ ಮಣಿಪುರ, ನಾಗಾಲ್ಯಾಂಡ್ ರಾಜ್ಯಗಳು ಕರ್ನಾಟಕ ಮಾದರಿಯ ಸ್ಥಾನಕ್ಕೆ ಬರಬಹುದು. ಈ ಕರ್ನಾಟಕ ಮಾದರಿಯ ಮೇಲೆ ಸಾಕಷ್ಟು ವಿದೇಶಿ ವಿದ್ಯಾರ್ಥಿಗಳು ಪಿಎಚ್ಡಿ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಒಂದರಲ್ಲೇ ಕಳೆದ 20 ವರ್ಷಗಳಲ್ಲಿ 10 ಲಕ್ಷ ಮಕ್ಕಳು ಸೋಲಾರ್ ದೀಪದಡಿ ಓದಿದ್ದಾರೆ. ಕರ್ನಾಟಕ ಮಾದರಿಯನ್ನು ಅನುಸರಿಸಿ ದರೆ ಭಾರತದಲ್ಲಿ ಕಳೆದ 70 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಬದುಕುತ್ತಿ ರುವ 30 ಕೋಟಿ ಮಂದಿಗೆ ಬೆಳಕು ನೀಡಬಹುದಾಗಿದೆ ಎಂದ ಅವರು, ಕೇವಲ ಗೂಗಲ್ ಸರ್ಚ್ನಿಂದ ದೇಶದ ಸಮಸ್ಯೆಗಳನ್ನು ಬಗೆಹರಿಸಲು ಆಗಲ್ಲ. ಯುವಕರು ಫೇಸ್ಬುಕ್, ಮೊಬೈಲ್ಗಳನ್ನು ಬಿಟ್ಟು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೆಲಸ ಮಾಡಬೇಕಾಗಿದೆ ಎಂದರು.
ಸೋಲಾರ್ ಗ್ರಾಮ ಘೋಷಣೆ ಯನ್ನು ಉದ್ಘಾಟಿಸಿದ ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನಾಲ್ಕು ವರ್ಷಗಳಲ್ಲಿ ಕರ್ನಾಟಕ ರಾಜ್ಯ 750 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್ಗೆ ಸೇರಿಸಿದೆ. ಇನ್ನು ಒಂದು ವರ್ಷದಲ್ಲಿ 2000 ಮೆ.ವ್ಯಾ. ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್ಗೆ ನೀಡುವ ಗುರಿ ಹೊಂದ ಲಾಗಿದೆ. ಮುಂದಿನ 2-3ವರ್ಷಗಳಲ್ಲಿ ಕರ್ನಾಟಕ ರಾಜ್ಯ ಸೌರವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಜ್ಯ ಆಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಲೇ ಅಡಿಪಾಯ ಹಾಕಿದೆ ಎಂದರು.
ಪೇಜಾವರ ಸ್ವಾಮೀಜಿ ದೇವಸ್ಥಾನಗಳಿಗೆ ಕೊಡುಗೆಯಾಗಿ ನೀಡಿರುವ ಸೋಲಾರ್ ದೀಪಗಳನ್ನು ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ಚಂದ್ರ ಶೇಖರ್ ರಾವ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜು ನಾಥ್ ವಹಿಸಿದ್ದರು.
ಸೋಲಾರ್ ಯೋಜನೆಯ ಅನುಷ್ಠಾನವನ್ನು ಕುಂದಾಪುರ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ನೆರವೇರಿಸಿದರು. ಸೋಲಾರ್ ಬೀದಿದೀಪವನ್ನು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಮನೆಗಳಿಗೆ ಸೋಲಾರ್ ದೀಪಗಳನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಅನಂತಕೃಷ್ಣರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ನ ಅಧ್ಯಕ್ಷ ಎ.ಜಿ.ಕೊಡ್ಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಅಮಾಸೆಬೈಲು ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಶೆಡ್ತಿ, ಭಾರತೀಯ ವಿಕಾಸ ಟ್ರಸ್ಟ್ನ ಕೆ.ಎಂ.ಉಡುಪ, ತಾಪಂ ಸದಸ್ಯೆ ಜ್ಯೋತಿ ಪೂಜಾರ್ತಿ, ಶಾಲಾ ಮುಖ್ಯೋಪಾಧ್ಯಾಯ ತಿಮ್ಮಪ್ಪ ಮೊದಲಾದ ವರು ಉಪಸ್ಥಿತರಿದ್ದರು.
ಅಮಾಸೆಬೈಲು ಸೋಲಾರ್ ಗ್ರಾಮ ಘೋಷಣೆ
2012ರಲ್ಲಿ ಆರಂಭಗೊಂಡ ಸಂಪೂರ್ಣ ಸೋಲಾರ್ ಗ್ರಾಮ ಯೋಜನೆ ಯಲ್ಲಿ ಅಮಾಸೆಬೈಲು ಗ್ರಾಮ ವ್ಯಾಪ್ತಿಯ 1497 ಮನೆಗಳಿಗೆ(2 ದೀಪದ 497 ಮತ್ತು 4 ದೀಪದ 1000 ಮನೆಗಳು) ಹಾಗೂ 20 ಸೋಲಾರ್ ಬೀದಿದೀಪ ಗಳನ್ನು ಅಳಪಡಿಸಲಾಗಿದೆ.
ಒಟ್ಟು 2.13 ಕೋಟಿ ವೆಚ್ಚದ ಈ ಯೋಜನೆಗೆ ಫಲಾನುಭವಿಗಳಿಂದ 77.31 ಲಕ್ಷ ರೂ. ಸಂಗ್ರಹಿಸಲಾಗಿದೆ. ಎಂಎನ್ಆರ್ಇ ಮತ್ತು ಕೆಆರ್ಇಡಿಎಲ್ನಿಂದ 80.80ಲಕ್ಷ ರೂ., ಜಿಲ್ಲಾಡಳಿತದಿಂದ 25ಲಕ್ಷ ರೂ., ಕರ್ಣಾಟಕ ಬ್ಯಾಂಕ್ 5ಲಕ್ಷ ರೂ., ಧರ್ಮಸ್ಥಳ ಯೋಜನೆಯಿಂದ 2ಲಕ್ಷ ರೂ. ಮಂಜೂರಾಗಿದೆ.
ಈಗಾಗಲೇ ಗ್ರಾಪಂ ವ್ಯಾಪ್ತಿಯ 29 ದೇವಸ್ಥಾನಗಳಿಗೆ ಪೇಜಾವರ ಸ್ವಾಮೀಜಿ ನೀಡಿರುವ 2.32ಲಕ್ಷ ಆರ್ಥಿಕ ನೆರವಿನಿಂದ ಎರಡು ಸೋಲಾರ್ ದೀಪಗಳನ್ನು ಅಳವಡಿಸುವ ಕಾರ್ಯ ಮಾಡಲಾಗಿದೆ. ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳನ್ನು ಸಂಪೂರ್ಣ ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸಲು 26.46ಲಕ್ಷ ರೂ. ಹಣ ಬೇಕಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಎ.ಜಿ.ಕೊಡ್ಗಿ ಮಾಹಿತಿ ನೀಡಿದರು.