ಕುಂಬಳೆ: ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ

Update: 2017-04-30 17:01 GMT

ಮಂಜೇಶ್ವರ, ಎ.30: ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದ ಯುವಕನೋರ್ವನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಕುಂಬಳೆ ಸಮೀಪದ ಮಾಳಿಯಂಕರೆ ಎಂಬಲ್ಲಿ ರವಿವಾರ ಅಪರಾಹ್ನ ನಡೆದಿದೆ.

ಪೆರ್ವಾಡಿನ ಅಬ್ದುಲ್ ಸಲಾಂ(32) ಕೊಲೆಗೀಡಾದ ಯುವಕ. ಇವರ ಮೃತದೇಹವು ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರ ಜೊತೆಗಿದ್ದ ಕುಂಬಳೆಯ ಬದ್ರಿಯಾ ನಗರದ ನೌಶಾದ್(20) ಎಂಬವರಿಗೂ ಗಂಭೀರ ಇರಿತದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಬಳೆ ಸಮೀಪದ ಮಾಳಿಯಂಕರೆ ಕೋಟೆಯ ನಿರ್ಜನ ಪ್ರದೇಶದಲ್ಲಿ ಹರಿತವಾದ ಆಯುಧದಿಂದ ಕತ್ತು ಕೊಯ್ದು ತಲೆಯನ್ನು ಬೇರ್ಪಡಿಸಿದ ಸ್ಥಿತಿಯಲ್ಲಿ ಅಬ್ದುಲ್ ಸಲಾಂ ಅವರ ಮೃತದೇಹ ಪತ್ತೆಯಾಗಿದೆ.

ಅಬ್ದುಲ್ ಸಲಾಂ ಕುಂಬಳೆ ಗ್ರಾಪಂ ಸದಸ್ಯರಾಗಿದ್ದ ಪೇರಾಲ್ ಅಹ್ಮದ್ ಎಂಬವರ ಪುತ್ರ ಶಫೀಕ್ (25)ನನ್ನು 2014ರಲ್ಲಿ ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದನು.

ಅಬ್ದುಲ್ ಸಲಾಂ ಜೊತೆಗಿದ್ದ ನೌಶಾದ್‌ರ ಮೇಲೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದು ದಾಳಿ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಪ್ರಕರಣವೊಂದರ ಆರೋಪಿ ಪೇರಾಲಿನ ಸಿದ್ದೀಕ್ ಎಂಬಾತನ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆಗೆ ಸಂಬಂಧಿಸಿ ಅಬ್ದುಲ್ ಸಲಾಂ, ನೌಶಾದ್ ಸೇರಿದಂತೆ ನಾಲ್ವರನ್ನು ಕುಂಬಳೆ ಪೊಲೀಸರು ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಬಂಧಿಸಿದ್ದರು. ರವಿವಾರ ಅಪರಾಹ್ನ 2 ಗಂಟೆ ಸುಮಾರಿಗೆ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆನಂತರ ಕೊಲೆಗೈದ ಸ್ಥಿತಿಯಲ್ಲಿ ಅಬ್ದುಲ್ ಸಲಾಂ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಎರಡು ಬೈಕ್‌ಗಳು ಹಾಗೂ ಒಂದು ಆಟೋರಿಕ್ಷಾ ಪತ್ತೆಯಾಗಿದೆ.

ಹಳೆ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News