ಕಾರಿಗೆ ಆ್ಯಂಬುಲೆನ್ಸ್ ಢಿಕ್ಕಿ: ಅಜ್ಜಿ-ಮೊಮ್ಮಗಳು ಮೃತ್ಯು
ಮಂಜೇಶ್ವರ, ಎ.30: ಕಾರಿಗೆ ಆ್ಯಂಬುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ಅಜ್ಜಿ-ಮೊಮ್ಮಗಳು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬಂದ್ಯೋಡು ಮಳ್ಳಂಗೈ ಬಳಿ ರವಿವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.
ಮಲ್ಲಂಗೈಯ ಯೂಸುಫ್ ಹಾಜಿಯವರ ಪತ್ನಿ ದುಲೈಕಾ(60) ಮತ್ತು ಅವರ ಪುತ್ರಿ ಕುಬ್ರಾ ಹಾಗೂ ಅಹ್ಮದ್ ಕುಂಞಿ ದಂಪತಿಯ ಪುತ್ರಿ ಮುಫೀದಾ(17) ಮೃತಪಟ್ಟವರಾಗಿದ್ದಾರೆ. ಮುಫೀದಾ ಮಂಗಳೂರಿನ ಯೆನೆಪೊಯ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದರು.
ದುಲೈಕಾ, ಮುಫೀದಾ ಸೇರಿದಂತೆ ನಾಲ್ವರು ಮಹಿಳೆಯರು ಹಾಗೂ ಮಗುವೊಂದು ಕಾರಿನಲ್ಲಿ ಉಪ್ಪಳ ಕಡೆಯಿಂದ ಮಲ್ಲಂಗೈಯಲ್ಲಿರುವ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರಿದ್ದ ಕಾರಿಗೆ ಕುಂಬಳೆಯಲ್ಲಿ ಚೂರಿ ಇರಿತಕ್ಕೊಳಾಗಿ ಗಂಭೀರ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸರಕಾರಿ ಆ್ಯಂಬುಲೆನ್ಸ್ ಢಿಕ್ಕಿ ಹೊಡೆದಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ದುಲೈಕಾ ಹಾಗೂ ಮುಫೀದಾರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರಿಬ್ಬರು ಮೃತಪಟ್ಟಿದ್ದರು.
ಘಟನೆಯ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.