ದ.ಕ. ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಸೆಕ್ಯೂರಿಟಿ ಪೋಲ್ ಅಳವಡಿಕೆ: ಬಂಧೀಖಾನೆ ಡಿಜಿಪಿ ಸತ್ಯನಾರಾಯಣ ರಾವ್
ಮಂಗಳೂರು, ಮೇ 3: ನಗರದ ಕೇಂದ್ರ ಕಾರಾ ಗೃಹಗಳಲ್ಲಿ ಮೊಬೈಲ್ ಜಾಮರ್ ಹಾಕಲು ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಮಾಲ್ಗಳಲ್ಲಿರುವಂತೆ ಮೊಬೈಲ್ ಎಫ್1 ಸೆಕ್ಯುರಿಟಿ ಪೋಲ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಬಂದೀಖಾನೆ ಡಿಜಿಪಿ ಎಚ್.ಎನ್.ಸತ್ಯನಾರಾಯಣ ತಿಳಿಸಿದ್ದಾರೆ. ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಸಂದರ್ಶನ ಕೊಠಡಿ ಉದ್ಘಾಟಿಸಿ, ನೂತನ ಪ್ರವೇಶ ಗೋಪುರಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತ ನಾಡುತ್ತಿದ್ದರು.
ಕಳೆದ ವರ್ಷ ಇಲಾಖೆ ಇಂತಹ ಐದು ಮೊಬೈಲ್ ಸೆಕ್ಯುರಿಟಿ ಪೋಲ್ಗಳನ್ನು ಖರೀದಿ ಸಿದೆ. ಈ ವರ್ಷ 10 ಖರೀದಿಸುವ ಗುರಿಯಿದೆ ಎಂದರು. ಪ್ರಸ್ತುತ ಮಂಗಳೂರು ಜೈಲಿನಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಕೈದಿಗಳಿದ್ದು, ಸೀಮಿತ ಸಿಬ್ಬಂದಿಯಿದ್ದಾರೆ. ಜೈಲಿನ ಸಾಮರ್ಥ್ಯ 210 ಆಗಿದ್ದು, ಪ್ರಸ್ತುತ 410 ಕೈದಿಗಳಿದ್ದಾರೆ ಎಂದ ವರು ಹೇಳಿದರು. ಕೈದಿಗಳನ್ನು ನ್ಯಾಯಾಲಯಕ್ಕೆ ಕರೆದೊ ಯ್ಯಲು ಪೊಲೀಸ್ ಕಾವಲು ಸಮಸ್ಯೆಯೂ ಕಾಡುತ್ತಿದೆ. ಆದ್ದರಿಂದ ಮುಂದಿನ ಐದು ವರ್ಷಗಳಲ್ಲಿ 32 ವೀಡಿಯೊ ಕಾನ್ಫರೆನ್ಸ್ ಯುನಿಟ್ ಜೈಲುಗಳಲ್ಲಿ ಅಳವಡಿಸಲು ನಿರ್ಧ ರಿಸಲಾಗಿದೆ. ಈಗಾಗಲೇ 1.89 ಕೋ.ರೂ. ಇದಕ್ಕಾಗಿ ಬಿಡುಗಡೆಯಾಗಿದೆ. ಮಂಗಳೂರು ಜೈಲಿನಲ್ಲೂ 3 ಯುನಿಟ್ ಅಳವಡಿಸಲು ನಿರ್ಧರಿಸಲಾಗಿದೆ ಎಂದರು.
ಪ್ರಸ್ತುತ ಇಲಾಖೆಯಲ್ಲಿರುವ ಶೇ.70ರಷ್ಟು ಸಿಬ್ಬಂದಿ ಉತ್ತರ ಕರ್ನಾಟಕ ಭಾಗದವರು. ದ.ಕ., ಉಡುಪಿಯವರು ಇಲಾಖೆಗೆ ಸೇರು ತ್ತಿಲ್ಲ. ಈಗ ಇರುವ ಸಿಬ್ಬಂದಿಯೂ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಸಿದ್ಧತೆ ಮಾಡುತ್ತಿದ್ದಾರೆ. ಕಾರಾಗೃಹವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಅಲ್ಲಿ 270 ಸಿಬ್ಬಂದಿ ಉಳಿದುಕೊಳ್ಳಲು ಅನುಕೂಲವಾಗುವಂತೆ ವಸತಿಗೃಹ ನಿರ್ಮಿಸಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಇಲಾಖೆಗೆ 1,811 ಸಿಬ್ಬಂದಿ ನೇಮಕ ಆಗಬೇಕಿದೆ. ಕಳೆದ ವರ್ಷ ಆಯ್ಕೆಯಾದವರ ನೇಮಕ ಈಗ ನಡೆಯುತ್ತಿದೆ ಎಂದು ಡಿಜಿಪಿ ಸತ್ಯನಾರಾಯಣ ತಿಳಿಸಿದರು. ಅಪರಾಧ ಸಾಬೀತಾದ ಕೈದಿಗಳಿಗೆ ನಡೆಸಲಾಗುವ ಯೋಗ, ಧ್ಯಾನ, ಕೌನ್ಸಿಲಿಂಗನ್ನು ವಿಚಾರಣಾಧೀನ ಕೈದಿಗಳಿಗೂ ಮಾಡಲು ನಿರ್ಧರಿಸಲಾಗಿದೆ. ರಾಮನಗರ, ಮೈಸೂರು ಕಾರಾಗೃಹಗಳಲ್ಲಿ ಇದು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಈ ಹಿಂದೆ ಮಂಗಳೂರಿನಲ್ಲಿ ವಿಚಾರಣಾ ಧೀನ ಕೈದಿಗಳನ್ನು ಭೇಟಿಯಾಗಲು ಅವರ ಮನೆಯವರು ಕಾರಾಗೃಹದ ಒಳಗೆ ಪ್ರವೇಶಿ ಸಬೇಕಿತ್ತು. ಇದೀಗ ಜೈಲಿನ ಆವರಣ ಗೋಡೆಗೆ ತಾಗಿಕೊಂಡೇ ಸಂದರ್ಶನ ಕೊಠಡಿ ನಿರ್ಮಿಸಲಾಗಿದೆ. ಕೊಠಡಿ ಆಧುನಿಕವಾಗಿ ನಿರ್ಮಿಸಲಾಗಿದ್ದು, ಇದಕ್ಕೆ ಕಾರಾಗೃಹದ ಒಳಗಿನಿಂದ ಹಾಗೂ ಹೊರಗಿನಿಂದ ಎರಡು ಪ್ರವೇಶ ದ್ವಾರಗಳಿವೆ. ಒಳಗೆ ತಲಾ 5-5 ಕಂಪಾರ್ಟ್ಮೆಂಟ್ಗಳಿವೆ. ಕೈದಿ ಹಾಗೂ ಸಂಬಂಧಿಕರು ಮಾತನಾಡುವ ಕಂಪಾರ್ಟ್ ಮೆಂಟ್ಗೆ ಮಧ್ಯದಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸುವ ಕಾರ್ಯ ಶೀಘ್ರವೇ ನಡೆ ಯಲಿದೆ ಎಂದು ಡಿಜಿಪಿ ಮಾಹಿತಿ ನೀಡಿದರು. ಸಿಸಿಟಿವಿ ಫೂಟೇಜ್ ಸೋರಿಕೆಯಾದ ಮಾಹಿತಿಯಿಲ್ಲ!
ಅಹ್ಮದ್ ಖುರೇಷಿ ಪ್ರಕರಣಕ್ಕೆ ಸಂಬಂಧಿ ಸಿದಂತೆ ಜೈಲಿನಲ್ಲಿದ್ದ ಸಿಸಿಟಿವಿ ಫುಟೇಜ್ಗಳನ್ನು ಪೊಲೀಸ್ ಇಲಾಖೆಗೆ ನೀಡಲಾಗಿತ್ತು. ಆದರೆ ಅದು ವಾಟ್ಸ್ಆ್ಯಪ್ಗಳಲ್ಲಿ ಹೇಗೆ ಹರಿ ದಾಡಿತು ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಡಿಜಿಪಿ ಸತ್ಯನಾರಾಯಣ ಉತ್ತರಿಸಿದರು. ಪಶ್ಚಿಮ ವಲಯ ಐಜಿಪಿ ಹರಿಶೇಖರನ್, ಎಸ್ಪಿ ಭೂಷಣ್ ಬೊರಸೆ, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ, ಎಸಿಪಿ ಉದಯ್ ನಾಯಕ್, ಕಾರಾಗೃಹದ ಅಸಿಸ್ಟೆಂಟ್ ಸುಪರಿಂ ಟೆಂಡೆಂಟ್ ವಿ.ಕೃಷ್ಣಮೂರ್ತಿ, ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿಮೋಹನ ಚೂಂತಾರು, ಬರ್ಕೆ ಠಾಣಾ ನಿರೀಕ್ಷಕ ರಾಜೇಶ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.