×
Ad

ಜೀವನ ಶಿಕ್ಷಣಕ್ಕೆ ಸ್ಕೌಟ್ಸ್ ಪೂರಕ: ಪ್ರಮೋದ್ ಮದ್ವರಾಜ್

Update: 2017-05-06 21:27 IST

ಉಡುಪಿ, ಮೇ 6: ವಿದ್ಯಾರ್ಥಿ ಜೀವನದಲ್ಲಿ ಬರೇ ಪುಸ್ತಕದ ಓದು ಶಿಕ್ಷಣವೆನಿಸಿಕೊಳ್ಳದು. ಸ್ಕೌಟ್ಸ್‌ನಂತಹ ಸಂಘಟನೆಗಳಲ್ಲಿ ಪಾಲ್ಗೊಂಡು ಅನುಭವ ಪಡೆಯುವುದೇ ನಿಜವಾದ ಶಿಕ್ಷಣ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅಭಿಪ್ರಾಯ ಪಟ್ಟಿದ್ದಾರೆ.

ಶನಿವಾರ ಅಲೆವೂರಿನ ಪ್ರಗತಿ ನಗರದಲ್ಲಿರುವ ಡಾ.ವಿ.ಎಸ್ ಆಚಾರ್ಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ವಿಭಾಗ ಮಟ್ಟದ ರಾಷ್ಟ್ರಪತಿ ಪೂರ್ವ ಸಿದ್ಧತಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ತಮ್ಮ ಶಾಲಾ, ಕಾಲೇಜು ದಿನಗಳಲ್ಲಿ ಸ್ಕೌಟ್, ಗೈಡ್ಸ್, ಎನ್.ಎಸ್.ಎಸ್, ಎನ್‌ಸಿಸಿಯಂಥ ಜೀವನ್ಮುಖಿ ಶಿಬಿರಗಳಲ್ಲಿ ಪಾಲ್ಗೊಳ್ಳು ವುದರಿಂದ ಸಾಮಾಜಿಕವಾಗಿ ಬದುಕಲು ಕಲಿಯುತ್ತಾರೆ. ಇಂತಹ ಶಿಬಿರಗಳಲ್ಲಿ ಅವರಿಗೆ ನಿಜವಾದ ಜೀವನ ಶಿಕ್ಷಣ ಲಭಿಸುತ್ತದೆ ಎಂದರು. ಸಂಸ್ಥೆಯ ಅಭಿವೃದ್ಧಿಗೆ ಯುವಸಬಲೀಕರಣ ಇಲಾಖೆಯಿಂದಲೂ ನೆರವು ನೀಡುವುದಾಗಿ ಅವರು ಇದೇ ಸಂದಭರ್ದಲ್ಲಿ ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಂತ ವಿ ಆಚಾರ್ಯ ಮಾತನಾಡಿದರು. ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್, ಜಿಲ್ಲಾ ಸ್ಕೌಟ್ಸ್ ಆಯುಕ್ತೆ ಎಡ್ವಿನ್ ಆಳ್ವ, ಶಿಬಿರದ ನಾಯಕರಾದ ಶಾಂತರಾಮ ಪ್ರಭು, ಕಾಮಾಕ್ಷಿ ಉಪಸ್ಥಿತರಿದ್ದರು.

5 ದಿನಗಳ ಕಾಲ ನಡೆದ ಶಿಬಿರದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಕಾರವಾರ, ಹಾಸನದ ಒಟ್ಟು 330 ವಿದ್ಯಾರ್ಥಿಗಳು ಹಾಗೂ 40 ಸಿಬ್ಬಂದಿಗಳು ಭಾಗವಹಿಸಿದ್ದರು. ಡಾ.ಜಯರಾವ್ ಶೆಟ್ಟಿಗಾರ್ ಸ್ವಾಗತಿಸಿ, ಪ್ರಭಾಕರ ಭಟ್ ವಂದಿಸಿದರು. ಆನಂದ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News