ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿ: ಅಧಿಕಾರಿಗಳಿಗೆ ಡಿಸಿ ಕರೆ

Update: 2017-05-06 18:21 GMT

ಉಡುಪಿ, ಮೇ 6: ಜಿಲ್ಲೆಯಲ್ಲಿ ಜೂನ್‌ನಿಂದ ಪ್ರಾರಂಭಗೊಳ್ಳುವ ಮಳೆಗಾಲವನ್ನು ಎದುರಿಸಲು ಅಧಿಕಾರಿಗಳು ಸಂಪೂರ್ಣ ಸನ್ನದ್ಧರಾಗಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕರೆ ನೀಡಿದ್ದಾರೆ.

ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಮುಂಗಾರು ಮಳೆಯ ಸಂದರ್ಭ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿಭಾಯಿಸುವ ಕುರಿತ ಕೈಗೊಳ್ಳಬೇಕಾದ ಅಗತ್ಯ ಮುಂಜಾಗೃತಾ ಕ್ರಮ ಹಾಗೂ ರಕ್ಷಣಾ ಕ್ರಮ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಮತ್ತು ತುರ್ತು ಕರೆಗಳನ್ನು ಸ್ವೀಕರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಕಳೆದ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದವರ ಕಾಮಗಾರಿಯಿಂದ ಅಲ್ಲಲ್ಲಿ ಕೃತಕ ನೆರೆ ಉಂಟಾಗಿದ್ದು, ಈ ಸಾಲಿನಲ್ಲಿ ಅದೇ ಸಮಸ್ಯೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ರಾ.ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತಂತೆ ವರದಿಯನ್ನು ನೀಡಲು ಸೂಚಿಸಿದ ಅವರು, ಕಾಮಗಾರಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿ, ಮುಂಗಾರು ಕಾರ್ಯಪಡೆಯನ್ನು ರಚಿಸುವಂತೆ ಸೂಚಿಸಿದರು.

ಪಡುಬಿದ್ರೆ ವ್ಯಾಪ್ತಿಯಲ್ಲಿ ಹಾಗೂ ಕುಂದಾಪುರ ದಿಂದ ಶಿರೂರುವರೆಗಿನ ರಸ್ತೆ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಅಪಘಾತಗಳಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಅರಣ್ಯ ಇಲಾಖೆ ಒಣಗಿದ ಹಾಗೂ ಅಪಾಯಕಾರಿ ಮರಗಳನ್ನು ಸಬೂಬು ನೀಡದೆ ತಕ್ಷಣವೇ ತೆರವುಗೊಳಿಸಬೇಕು. ನಿಮ್ಮಲ್ಲಿ ಈ ಸಂಬಂಧ ಇರುವ ಸೌಕರ್ಯಗಳ ಪಟ್ಟಿ ನೀಡಿ. ಸೂಕ್ತ ಸಲಕರಣೆಗಳಿಲ್ಲದಿದ್ದಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ನಿಧಿಯನ್ನು ಬಳಸಿ ಸೌಕರ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದವರು ಹೇಳಿದರು.

ಈ ಸಂಬಂಧ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಸಭೆಯಲ್ಲಿ ಉಪಸ್ಥಿತರಿದ್ದ ಎಸಿಎಫ್ ಅಚ್ಚಪ್ಪ ಅವರಿಗೆ ಇಲಾಖೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ, ಅಗತ್ಯ ಸಲಕರಣೆಗಳ ಬೇಡಿಕೆ ಪಟ್ಟಿಯನ್ನು ತಕ್ಷಣವೇ ಸಲ್ಲಿಸುವಂತೆ ತಿಳಿಸಿದರು. ಅಗ್ನಿಶಾಮಕ ದಳದವರಿಗೂ ಇದೇ ಸೂಚನೆ ನೀಡಿದ ಜಿಲ್ಲಾಧಿಕಾರಿ, ಮುಳುಗುತಜ್ಞರಿಲ್ಲದಿದ್ದಲ್ಲಿ ಖಾಸಗಿಯವರೊಂದಿಗೆ ಸಂಪರ್ಕ ಸಾಧಿಸಿ ಅಗತ್ಯ ನೆರವು ಪಡೆಯಿರಿ. ವಿಕೋಪ ಸಂದರ್ಭ ಇಲ್ಲಗಳ ಪಟ್ಟಿ ಹೇಳದೆ ಅಗತ್ಯಗಳನ್ನು ತಕ್ಷಣವೇ ಗಮನಕ್ಕೆ ತನ್ನಿ ಎಂದು ನಿರ್ದೇಶಿಸಿದರು. ಎಲ್ಲ ಇಲಾಖೆಗಳು ತಹಶೀಲ್ದಾರ್ ಮತ್ತು ಇಒ ಕಚೇರಿಗಳನ್ನೊಳಗೊಂಡಂತೆ ರಿಸರ್ವ್ ಮ್ಯಾಪಿಂಗ್ ಸಿದ್ಧಪಡಿಸಿ ಎಂದವರು ಹೇಳಿದರು.

ಈಗಾಗಲೇ ಬಿಸಿಲಿನ ನಡುವೆ ಮಳೆ ಪ್ರಾರಂಭವಾಗಿದೆ. ಇದರಿಂದ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳು ಹರಡದಂತೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮೆಸ್ಕಾಂ ಇಲಾಖೆ ಮಳೆಗಾಲಕ್ಕೆ ಸಜ್ಜಾದ ಬಗ್ಗೆ ಅನುಸರಣೆ ವರದಿ ನೀಡಬೇಕು. ಪಶುಸಂಗೋಪನೆ ಇಲಾಖೆ ಪ್ರಾಣಿಗಳು ಸತ್ತರೆ ಮರಣೋತ್ತರ ವರದಿಯನ್ನು ತಕ್ಷಣವೇ ನೀಡಬೇಕು ಎಂದರು.

ತಗ್ಗು ಪ್ರದೇಶಗಳಲ್ಲಿ, ಸೇತುವೆ ಬದಿಗಳಲ್ಲಿ, ನದಿ ದಂಡೆಗಳಲ್ಲಿ, ಕಿಂಡಿ ಅಣೆಕಟ್ಟುಗಳಿರುವಲ್ಲಿ, ಸಮುದ್ರ ತೀರದಲ್ಲಿ ಈಗಾಗಲೇ ಸಮಸ್ಯೆಗಳು, ಸವಾಲುಗಳು ಎದುರಾಗುತ್ತಿವೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಇವುಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಿಯಾಂಕಾ ಸೂಚಿಸಿದರು.

ಕೋರೆಗಳಲ್ಲಿ ಎಚ್ಚರಿಕೆ ಫಲಕ: ಗಣಿಗಾರಿಕೆ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕ, ಈಜಾಟ ನಿಷೇಧ ಫಲಕಗಳಿರಬೇಕು. ಈಗಾಗಲೇ ಕೆಐಎಆರ್‌ಡಿಎಲ್ ಸಂಸ್ಥೆಗೆ ಬೇಲಿ ಹಾಕಲು ಸೂಚಿಸಲಾಗಿದ್ದು, ಬೇಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿಯು ಗಣಿ ಇಲಾಖೆ ಹಾಗೂ ತಾಪಂಗಳ ಇಒಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ದುರಂತಗಳು ಸಂಭವಿಸಿದರೆ ತಹಶೀಲ್ದಾರರು ತಕ್ಷಣವೇ ಅದನ್ನು ತಮ್ಮ ಗಮನಕ್ಕೆ ತರಬೇಕು. ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳು ಕಡಲ್ಕೊರೆತದಲ್ಲಿ ವಿಲೀನವಾಗದಂತೆ ಮುನ್ನೆಚ್ಚರಿಕೆ ವಹಿಸಿ ಯೋಜನೆಯನ್ನು ಜಾರಿಗೆ ತರುವಂತೆ ಸೂಚಿಸಿದ ಅವರು, ಮೇ 18ರಿಂದ 31ರವರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಜಿಲ್ಲೆಯಲ್ಲಿ ಅಣಕು ಕಾರ್ಯಾಚರಣೆ ನಡೆಸಲಿದ್ದು, ಅಧಿಕಾರಿಗಳು ಸಜ್ಜಾಗಿರಬೇಕೆಂದು ಅವರು ನುಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಲಾ ವಾಹನಗಳಲ್ಲಿ ಸುರಕ್ಷಾ ಕ್ರಮ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳಲ್ಲಿ ಸುರಕ್ಷತೆಯನ್ನು ಖಾತರಿ ಪಡಿಸಿಕೊಳ್ಳಲು ಮಕ್ಕಳ ರಕ್ಷಣೆ ಸಮಿತಿ ಜೊತೆ ಆರ್‌ಟಿಒ ಮತ್ತು ವಿದ್ಯಾಂಗ ಇಲಾಖೆ ಉಪನಿರ್ದೇಶಕರು ಸಭೆ ನಡೆಸಿ, ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಯಾವುದೇ ದುರಂತಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ.
-ಪ್ರಿಯಾಂಕಾ ಮೇರಿ ಫ್ರಾನ್ಸಿಸ್,
ಜಿಲ್ಲಾಧಿಕಾರಿ ಉಡುಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News