ಸಾರ್ವಜನಿಕ ಹಣ ಪೋಲಾಗುವುದೆಂದರೆ ಹೀಗೇನೇ!
ಮಂಗಳೂರು, ಮೇ 7: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಜೈವಿಕ ತ್ಯಾಜ್ಯ ಸಂಸ್ಕರಣಾ ಘಟಕವೆಂಬ ಹೆಗ್ಗಳಿಕೆಯೊಂದಿಗೆ ಮುಡಿಪುವಿನ ಕುರ್ನಾಡು ಗ್ರಾಮ ಪಂಚಾಯತ್ನಲ್ಲಿ ತಲೆ ಎತ್ತಿದ್ದ ಕಟ್ಟಡ ಇಂದು ನಿರ್ವಹಣೆ ಇಲ್ಲದೆ ನಾ ಪಾಳು ಬಿದ್ದ ಸ್ಥಿತಿಯಲ್ಲಿದೆ. ಅಷ್ಟೇ ಅಲ್ಲ, ಘಟಕದ ದುಸ್ಥಿತಿಯನ್ನು ಅದರ ಎದುರೇ ರಾಶಿ ಬಿದ್ದಿರುವ ಕಸದ ರಾಶಿ ಅಣಕಿಸುವಂತಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾದ ಬಹು ನಿರೀಕ್ಷೆಯ ಘಟಕವೊಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉದಾಸೀನ ಪ್ರವೃತ್ತಿಯಿಂದಾಗಿ ಕೆಲ ವರ್ಷಗಳಲ್ಲೇ ಪಾಳು ಬಿದ್ದಿರುವುದು ಸಾರ್ವಜನಿಕರಿಗೆ ಮಾಡಿರುವ ಅವಮಾನವೆಂದರೂ ತಪ್ಪಲ್ಲ. ಸಾರ್ವಜನಿಕರ ತೆರಿಗೆ ಹಣ ಅದು ಹೇಗೆಲ್ಲಾ ಪೋಲಾಗುತ್ತದೆ ಎಂಬುದಕ್ಕೆ ಈ ಕಟ್ಟಡ ನಿದರ್ಶನವೂ ಆಗಿದೆ.
ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಈ ಜೈವಿಕ ತ್ಯಾಜ್ಯ ಸಂಸ್ಕರಣಾ ಘಟಕವನ್ನು 2010ರ ಅಕ್ಟೋಬರ್ 2ರಂದು ಉದ್ಘಾಟಿಸಲಾಗಿತ್ತು. 20 ಸೆಂಟ್ಸ್ ಜಾಗದಲ್ಲಿ 2.5 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿತ್ತು. 2 ಲಕ್ಷ ರೂ.ಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅನುದಾನ ಹಾಗೂ 50,000 ರೂ.ಗಳನ್ನು ಸ್ಥಳೀಯ ಪಂಚಾಯತ್ನಿಂದಲೇ ಇದಕ್ಕಾಗಿ ವ್ಯಯಿಸಲಾಗಿತ್ತು. ಸ್ಥಳೀಯವಾಗಿ ಸಂಗ್ರಹವಾದ ತ್ಯಾಜ್ಯವನ್ನು ಜೈವಿಕ ಮತ್ತು ಇತರ ತ್ಯಾಜ್ಯವಾಗಿ ವಿಂಗಡಿಸಿ, ಜೈವಿಕ ತ್ಯಾಜ್ಯಕ್ಕೆ ಒಎಸ್1 ದ್ರಾವಣವನ್ನು ಸಿಂಪಡಿಸುವ ಮೂಲಕ ಅದನ್ನು ಗೊಬ್ಬರವಾಗಿ ಪರಿವರ್ತಿಸುವ ಕಾರ್ಯ ಈ ಘಟಕದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅದ್ಯಾವುದೇ ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ ಇದೀಗ ಸಾರ್ವಜನಿಕರು ಘಟಕದ ಎದುರೇ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಕವರ್ಗಳನ್ನು ಸುರಿಯುತ್ತಿದ್ದಾರೆ.
ಇದು ದನ ಕರುಗಳು ಹಾಗೂ ನಾಯಿಗಳು ಈ ತ್ಯಾಜ್ಯಗಳನ್ನು ತಿನ್ನಲು ಬರುವುದರಿಂದ ತ್ಯಾಜ್ಯ ರಸ್ತೆಯಲ್ಲೆಲ್ಲಾ ಹರಡಿ ಗಬ್ಬೆದ್ದು ಈ ದಾರಿಯಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಳ್ಳುವಂತಾಗಿದೆ. ಘಟಕದ ಉದ್ಘಾಟನೆಯ ವೇಳೆ ಪಂಚಾಯತ್ನ 250 ಅಂಗಡಿಗಳು ಮತ್ತು ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ, ಒಂದು ಟನ್ ತ್ಯಾಜ್ಯದಿಂದ 200 ಕಿಲೋ ಗೊಬ್ಬರ ಉತ್ಪಾದನೆಗೆ ನಿರ್ಧರಿಸಲಾಗಿತ್ತು. ಉದ್ಘಾಟನೆಗೊಂಡು ಕೆಲ ಸಮಯ ಮಾತ್ರ ಈ ಘಟಕ ಕಾರ್ಯಾಚರಣೆ ನಡೆಸಿತ್ತು. ಇದೀಗ ಕಟ್ಟಡ ಸಂಪೂರ್ಣ ಹಾಳಾಗಿದೆ. ಜಿಲ್ಲೆಯ ಪ್ರಥಮ ಜೈವಿಕ ತ್ಯಾಜ್ಯ ಸಂಸ್ಕರಣಾ ಘಟಕವಾಗಿ ಕುರ್ನಾಡುವಿನಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿತ್ತು. ಬಹಳ ನಿರೀಕ್ಷೆಯೂ ಇತ್ತು. ಇದನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನೂ ನಡೆಸಲಾಗಿತ್ತು.
ಅದಾಗಿಯೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಈ ಘಟಕದ ಬಗ್ಗೆ ಅವ್ಯವಸ್ಥೆ, ಎದುರಿನ ತ್ಯಾಜ್ಯ ರಾಶಿಯ ಕುರಿತಂತೆಯೂ ಜಿಲ್ಲಾ ಪಂಚಾಯತ್ನ ಗಮನ ಸೆಳೆಯಲಾಗಿತ್ತು. ಇದರ ನಿಮಿತ್ತ ಕೆಲ ದಿನ ಕಸದ ರಾಶಿಯನ್ನು ತೆರವುಗೊಳಿಸುವ ಕಾರ್ಯ ನಡೆದಿತ್ತು. ಇದೀಗ ಮತ್ತದೇ ಪರಿಸ್ಥಿತಿ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ನಾಗರಿಕರೂ ಕೂಡಾ ಪರಿಸರ ಕಾಳಜಿಯನ್ನು ಪ್ರದರ್ಶಿಸಿದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗದು ಎನ್ನುತ್ತಾರೆ ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ.