×
Ad

ಆರೋಗ್ಯ-ಸೌಹಾರ್ದದ ಸಂದೇಶದೊಂದಿಗೆ ಕಾಸರಗೋಡು ಮ್ಯಾರಥಾನ್

Update: 2017-05-07 18:07 IST

ಕಾಸರಗೋಡು, ಮೇ 7: ಆರೋಗ್ಯ ಹಾಗೂ ಸೌಹಾರ್ದದ ಸಂದೇಶದೊಂದಿಗೆ ಗುಡ್ ಮಾರ್ನಿಂಗ್ ಕಾಸರಗೋಡು ಇದರ ಆಶ್ರಯದಲ್ಲಿ ಕಾಸರಗೋಡು ಮ್ಯಾರಥಾನ್-2017 ನಡೆಯಿತು.

ಅಡ್ಕತ್ತಬೈಲು ತಾಳಿಪಡ್ಪು ಮೈದಾನದಿಂದ ಆರಂಭಗೊಂಡ ಮ್ಯಾರಥಾನ್ ವಿದ್ಯಾನಗರದಲ್ಲಿರುವ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು. ವಿಜೇತರ ಹೊರತು ಕಾಸರಗೋಡು ಜಿಲ್ಲೆಯ ಮೊದಲ ಮೂರು ಸ್ಥಾನಗಳನ್ನು ಪಡೆದವರಿಗೆ, 45 ವಯಸ್ಸಿಗಿಂತ ಮೇಲ್ಪಟ್ಟವರಿಗೆ ಪ್ರತ್ಯೇಕ ಬಹುಮಾನಗಳನ್ನು ವಿತರಿಸಲಾಯಿತು. ಓಟದಲ್ಲಿ ಭಾಗವಹಿಸಿದ ಎಲ್ಲರಿಗೆ ಪದಕ ಹಾಗೂ ಜೆರ್ಸಿ ವಿತರಿಸಲಾಯಿತು. 700 ಮಂದಿ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.

ಅಡ್ಕತ್ತಬೈಲಿನ ತಾಳಿಪಡ್ಪು ಮೈದಾನದಲ್ಲಿ ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಜಿ. ಸೈಮನ್ ಧ್ವಜಾರೋಹಣಗೈದು ಮ್ಯಾರಥಾನ್ ಗೆ ಚಾಲನೆ ನೀಡಿದರು. ಮುಹಮ್ಮದ್ ಹಾಶಿಂ ಸ್ವಾಗತಿಸಿದರು.

ವಿದ್ಯಾನಗರ ನಗರಸಭಾ ಕ್ರೀಡಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭವನ್ನು ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಹಾರಿಸ್ ಚೂರಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಪಿ. ಬಿ. ಅಬ್ದುಲ್ ರಝಾಕ್, ಜಿಪಂ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್, ಜಿಲ್ಲಾ ಪ್ಲೀಡರ್ ನ್ಯಾಯವಾದಿ ಪಿ. ವಿ. ಜಯರಾಜನ್, ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣಿ ಜೋಸೆಫ್, ಉಪಾಧ್ಯಕ್ಷ ಟಿ. ಎ. ಶಾಫಿ ವಿಜೇತರಿಗೆ ಬಹುಮಾನ ವಿತರಿಸಿದರು.

ಭಾರತೀಯ ವ್ಯೋಮಪಡೆಯ ಫುಟ್ಬಾಲ್ ಸದಸ್ಯರಾಗಿದ್ದ, 1965-1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ ಅಲ್ತಾಫ್ ಹುಸೈನ್, ಅಂತಾರಾಷ್ಟ್ರೀಯ ಕಾರು ರ್ಯಾಲಿ ಚಾಂಪಿಯನ್ ಮೂಸಾ ಶರೀಫ್, ಕೇರಳ ರಣಜಿ ಕ್ರಿಕೆಟ್ ತಂಡ ಸದಸ್ಯ ಮುಹಮ್ಮದ್ ಅಝರುದ್ದೀನ್, ಬುಲ್ಲೆಟ್‌ನಲ್ಲಿ 15 ದಿನಗಳಲ್ಲಿ 2,300 ಕಿಲೋಮೀಟರ್ ಹಿಮಾಲಯನ್ ಒಡಿಸ್ಸಿ ಪ್ರಯಾಣ ನಡೆಸಿದ ಕೇರಳದ ಮೊದಲ ಮಹಿಳೆ ಪಿ. ಎನ್. ಸೌಮ್ಯ, ಮಲೇಶ್ಯಾದಲ್ಲಿ ನಡೆದ ಏಷಿಯನ್ ತ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಇಂಡಿಯನ್ ಜ್ಯೂನಿಯರ್ ತಂಡದ ಸದಸ್ಯೆ ಯಶ್ಮಿತಾ, ಕಲಾ-ಕ್ರೀಡಾ ವಲಯದ ಸಂಘಟಕರಾಗಿ ಸಾಧನೆಗೈದ ನಾಯಮ್ಮಾರ ಮೂಲೆ ಬೀಹುಲ್ ಇಸ್ಲಾಂ ಹಯರ್ ಸೆಕಂಡರಿ ಶಾಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿ. ಪವಿತ್ರನ್ ಮಾಸ್ತರ್ ಅವರನ್ನು ಸನ್ಮಾನಿಸಲಾಯಿತು.

ಬಾಲನ್ ಚೆನ್ನಿಕ್ಕೆರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News