ನಂದಿಕೂರು-ಪಲಿಮಾರು ರಸ್ತೆ ಕಾಮಗಾರಿಗೆ ಶಿಲಾನ್ಯಾಸ
ಪಡುಬಿದ್ರೆ, ಮೇ 8: ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಪಲಿಮಾರು ಗ್ರಾಮವನ್ನು ಸಂಪರ್ಕಿಸುವ ರೂ.20 ಲಕ್ಷ ವೆಚ್ಚದಲ್ಲಿ ಸುಮಾರು 1 ಕಿ.ಮೀ. ಸಂಪರ್ಕ ರಸ್ತೆ ಕಾಮಗಾರಿಗೆ ರವಿವಾರ ಶಿಲಾನ್ಯಾಸ ನೆರವೇರಿತು.
ಯುಪಿಸಿಎಲ್ ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಆಳ್ವ, ಅದಾನಿ ಸಮೂಹವು ಸುತ್ತಮುತ್ತಲಿನ ಗ್ರಾಮ ಪಂಚಾಯತ್ಗಳಿಗೆ ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ ಮಾಡಿದೆ. ಅದರಲ್ಲಿ ಪಲಿಮಾರು ಗ್ರಾಮ ಪಂಚಾಯತ್ಗೆ ಮೂರು ವರ್ಷದ ಅವಧಿಗೆ ಮೂರು ಕೋಟಿ ರೂ. ಅನುದಾನ ಘೋಷಿಸಿದೆ. ಈಗಾಗಲೇ ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ ಪಲಿಮಾರು ಮಹಾಲಿಂಗೇಶ್ವರ ದೇವಾಲಯದ ರಥಬೀದಿಯನ್ನು ಕಾಂಕ್ರೀಟಿಕರಣಗೊಂಡಿದೆ ಎಂದರು.
ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೆಂದ್ರ ಪುರ್ಟಾಡೊ ಮಾತನಾಡಿ, ಅದಾನಿ ಯುಪಿಸಿಎಲ್ನ ಸಿಎಸ್ಆರ್ ಅನುದಾನದಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಕ್ರಿಯಾ ಯೋಜನೆಯನ್ನು ಕಂಪೆನಿಗೆ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ, ಪಲಿಮಾರ್ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ದೇವಾಡಿಗ, ಗಾಯಿತ್ರಿ ಪ್ರಭು, ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಯುಪಿಸಿಎಲ್ ಕಂಪೆನಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಗೋಕುಲ್ದಾಸ್ ನಾಯಕ್, ವಸಂತಕುಮಾರ್, ಅದಾನಿ ಫೌಂಡೇಶನ್ನ ವಿನೀತ್ ಅಂಚನ್, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.