×
Ad

​ಪಿಒಎಸ್ ಯಂತ್ರವನ್ನು ಸರಕಾರವೇ ಒದಗಿಸಲಿ: ಪಡಿತರ ವಿತರಕರು- ನೌಕರರ ಸಂಘ ಆಗ್ರಹ

Update: 2017-05-09 16:05 IST

ಮಂಗಳೂರು, ಮೇ 9: ಪಡಿತರ ವ್ಯವಸ್ಥೆಗೆ ಸರಕಾರ ಜಾರಿಗೆ ತಂದಿದ್ದ ಕೂಪನ್ ವ್ಯವಸ್ಥೆ ಅವೈಜ್ಞಾನಿಕ ಎಂಬ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಪಿ.ಒ.ಎಸ್. ಯಂತ್ರ ಅಳವಡಿಕೆಯು ಪಡಿತರ ವಿತರಕರಿಗೆ ಹೊರೆಯಾಗಿದ್ದು, ಅದನ್ನು ಸರಕಾರವೇ ಒದಗಿಸಬೇಕು ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಮತ್ತು ನೌಕರರ ಸಂಘದ ಮಂಗಳೂರು ವಿಭಾಗ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಅಧ್ಯಕ್ಷ ಕೇಶವ ಮೂರ್ತಿ, ಈಗಾಗಲೇ ಕೂಪನ್ ವ್ಯವಸ್ಥೆಯಿಂದಾಗಿ ಸಾಕಷ್ಟು ತೊಂದರೆಯನ್ನು ಪಡಿತರ ವಿತರಕರು ಹಾಗೂ ಗ್ರಾಹಕರು ಅನುಭವಿಸಿದ್ದಾರೆ. ಇದೀಗ ಮತ್ತೆ ಪಿಒಎಸ್ ಯಂತ್ರ ಅಳವಡಿಕೆಗೆ ಸರಕಾರ ಒತ್ತಾಯಿಸುವ ಮೂಲಕ ವಿತರಕರ ಜೇಬಿಗೆ ಕತ್ತರಿ ಹಾಕುವ ಕಾರ್ಯವನ್ನು ನಡೆಸುತ್ತಿದೆ. ಸರಕಾರ ಈ ಯೋಜನೆಯನ್ನು ಪೈಲಟ್ ರೀತಿಯಲ್ಲಿ ಆರಂಭಿಸಿ ಅದರ ಸಾಧಕ ಬಾಧಕಗಳನ್ನು ಅರಿತ ಬಳಿಕವಷ್ಟೇ ಸಂಪೂರ್ಣ ಅಳವಡಿಕೆಗೆ ಮುಂದಾಗಬೇಕು. ಸರಕಾರವೇ ಈ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಹೇಳಿದರು.

ಪಿಒಎಸ್ ಯಂತ್ರ ಕಾರ್ಯಾಚರಿಸಲು ನ್ಯಾಯ ಬೆಲೆ ಅಂಗಡಿಯ ಮಾಲಕರ ಬೆರಳಚ್ಚು ಅಗತ್ಯ. ಇದರಿಂದಾಗಿ ಅಂಗಡಿ ಮಾಲಕರು ಅಂಗಡಿ ಬಿಟ್ಟು ಹೋಗುವಂತಿಲ್ಲ. ಮಾಲಕರು ಸೂಚಿಸುವ ಇನ್ನೊಬ್ಬ ವ್ಯಕ್ತಿಗೂ ಇದು ಅನ್ವಯವಾಗುವಂತೆ ಮಾಡಬೇಕು. ಅಂಗಡಿದಾರರಿಗೆ ನೀಡುವ ಕಮಿಷನ್ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.

ಕೂಪನ್ ವ್ಯವಸ್ಥೆ, ಪಿಒಎಸ್ ಯಂತ್ರ ಅಳವಡಿಕೆಯ ಗೊಂದಲದಿಂದಾಗಿ ಈಗಾಗಲೇ ಮಂಗಳೂರು ನಗರದ 70 ಮಂದಿ ಪಡಿತರ ವಿತರಕರಲ್ಲಿ 10 ಮಂದಿ ಈ ಕಾರ್ಯವನ್ನೇ ಬಿಟ್ಟಿದ್ದಾರೆ. ಮತ್ತೆ 8 ಮಂದಿ ಬಿಡುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲು ಸೂಚಿಸಲಾಗಿದೆ. ಅದಕ್ಕೆ ಸುಮಾರು 10 ಸಾವಿರದಷ್ಟು ವೆಚ್ಚವಾಗಲಿದೆ. ಅದನ್ನು ಖರೀದಿ ಮಾಡುವಷ್ಟು ಲಾಭಾಂಶ ವಿತರಕರಿಗೆ ಇಲ್ಲ. ಬಯೋಮೆಟ್ರಿಕ್ ಅಪರೇಟ್ ಮಾಡಲು ಸಿಬ್ಬಂದಿ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರಕಾರದ ಗಮನಕ್ಕೆ ತರಲಾಗಿದೆ. ಸರಕಾರವೇ ಇದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸಂಘದ ಗ್ರಾಮಾಂತರ ಪ್ರದೇಶದ ಅಧ್ಯಕ್ಷ ಶಿವರಾಮ ಮಲ್ಲಿ ಒತ್ತಾಯಿಸಿದರು.

ಪಡಿತರ ಸಾಗಾಟ, ಲಾರಿ ಬಾಡಿಗೆ, ಲೋಡ್ ಅನ್ ಲೋಡ್ ಮಾಡಿದ ಕೂಲಿದರ ಮತ್ತು ವಿತರಣೆ ಮಾಡಿದ ಲಾಭಾಂಶವೆಲ್ಲವೂ ವಿತರಕರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಎರಡು ತಿಂಗಳಿನಿಂದ ಅದ್ಯಾವುದೂ ಜಮಾ ಆಗಿಲ್ಲ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಸಾಲಿಯಾನ್, ಶೇಖರ್ ಅಮೀನ್, ಫೈರೋಝ್ ಡಿ.ಎಲ್. ಉಪಸ್ಥಿತರಿದ್ದರು.

ಒತ್ತಡದಿಂದ ಪಡಿತರ ವಿತರಣೆ ಅಸಾಧ್ಯ-ಬಿಟ್ಟುಕೊಡಲು ಸಿದ್ಧ!
ಸರಕಾರದ ನಿಯಮಗಳು ಪಡಿತರ ವಿತರಕರನ್ನು ಗೊಂದಲ ಹಾಗೂ ಆರ್ಥಿಕ ಸಂಕಷ್ಟಕ್ಕೀಡು ಮಾಡುತ್ತಿರುವುದರಿಂದ ಪಡಿತರ ವಿತರಣೆಯನ್ನು ಬಿಡಲು ಮಂಗಳೂರು ತಾಲೂಕಿನ ಗ್ರಾಮಾಂತರ ಪ್ರದೇಶದ ವಿತರಕರು ನಿರ್ಧರಿಸಿದ್ದಾರೆ ಎಂದು ಅಧ್ಯಕ್ಷ ಶಿವರಾಮ ಮಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News