ಮಂಗಳೂರು : ರಸ್ತೆ ಬದಿ ಕಸ ಎಸೆದರೆ ಪೊಲೀಸ್ ಕೇಸು, ವಾಹನದ ಲೈಸನ್ಸ್ ರದ್ದು
ಮಂಗಳೂರು, ಮೇ 10: ದ.ಕ ಜಿಲ್ಲೆಯಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಸದ ರಾಶಿಯನ್ನು ತಂದು ಸುರಿಯುತ್ತಿರುವುದನ್ನು ನಿಯಂತ್ರಿಸಲು ನಿಯಮಾನುಸಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ನಿರ್ದೇಶನ ನೀಡಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಸದ ರಾಶಿಯನ್ನು ಹಾಕುವ ಪ್ರದೇಶದಲ್ಲಿ ಸಿ.ಸಿ. ಕ್ಯಾಮರಾವನ್ನು ಅಳವಡಿಸಬೇಕು. ಹಗಲು ಮತ್ತು ರಾತ್ರಿ ಹೊತ್ತು ಗಸ್ತು ತಿರುಗಲು ಕಾವಲು ಪಡೆ ತಂಡವನ್ನು ರಚಿಸಬೇಕು. ಕಸತಂದು ಸುರಿಯುವ ವಾಹನದ ಮಾಲಕರ ಮೇಲೆ ಪೋಲಿಸ್ ಠಾಣೆಗೆ ದೂರು ದಾಖಲಿಸಬೇಕು. ವಾಹನದ ನೋಂದಣಿ ರದ್ದು ಪಡಿಸಲು ವಾಹನದ ಮಾಲಕರ ವಿರುದ್ಧ ಪ್ರಾದೇಶಿಕ ಸಾರಿಗೆ ಇಲಾಖೆಗೆ ದೂರು ದಾಖಲಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ನೆರವು ಘಟಕದ ಸಮಾಲೋಚಕರು ಗ್ರಾಮ ಪಂಚಾಯತ್ಗಳಿಗೆ ನಿರಂತರ ಭೇಟಿ ನೀಡಿ ಆಗುತ್ತಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.