ಸಹಾರನ್ಪುರ ಹಿಂಸಾಚಾರ ಪ್ರಕರಣ: ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ
Update: 2017-05-10 14:40 GMT
ಲಕ್ನೊ, ಮೇ 10: ಉ.ಪ್ರದೇಶದ ಸಹಾರನ್ಪುರದಲ್ಲಿ ಕಳೆದ ವಾರ ನಡೆದಿದ್ದ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಸಹಾರನ್ಪುರ (ನಗರ) ಪೊಲೀಸ್ ಅಧೀಕ್ಷಕ ಸಂಜಯ್ ಸಿಂಗ್ ಮತ್ತು (ಗ್ರಾಮೀಣ) ಪೊಲೀಸ್ ಅಧೀಕ್ಷಕ ರಫೀಕ್ ಅಹ್ಮದ್ ಅವರನ್ನು ವರ್ಗಾಯಿಸಲಾಗಿದ್ದು ನೂತನ ಅಧೀಕ್ಷಕರಾಗಿ ಪ್ರಬಲ್ ಪ್ರತಾಪ್ ಸಿಂಗ್(ನಗರ) ಮತ್ತು ವಿದ್ಯಾಸಾಗರ್(ಗ್ರಾಮೀಣ) ಅವರನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆರವಣಿಗೆಯೊಂದು ಸಾಗಿಹೋಗುವ ಸಂದರ್ಭ ಧ್ವನಿವರ್ಧಕದಲ್ಲಿ ಹಾಡು ಪ್ರಸಾರ ಮಾಡುತ್ತಿರುವುದನ್ನು ಇನ್ನೊಂದು ಜಾತಿಯ ಮಂದಿ ಆಕ್ಷೇಪಿಸಿದರೆಂಬ ಕಾರಣದಿಂದ ಮೇ 5ರಿಂದ ಸಹಾರನ್ಪುರದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ. ಸುಮಾರು 20ರಷ್ಟು ದಲಿತರ ಮನೆಗಳನ್ನು ಸುಟ್ಟುಹಾಕಲಾಗಿದೆ. ಮಂಗಳವಾರವೂ ನಗರದ ಕೆಲವೆಡೆ ಕಲ್ಲುತೂರಾಟದ ಘಟನೆಗಳು ನಡೆದಿರುವ ವರದಿಯಾಗಿವೆ. ಬುಧವಾರ ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.