×
Ad

ಪುತ್ತೂರು ಬ್ಲಡ್ ಬ್ಯಾಂಕ್ ಲೋಕಾರ್ಪಣೆ

Update: 2017-05-11 18:58 IST

ಪುತ್ತೂರು, ಮೇ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವಷ್ಟು ರಕ್ತದಾನ ಶಿಬಿರಗಳು ಬೇರೆಲ್ಲೂ ನಡೆಯುತ್ತಿಲ್ಲ. ಆದರೆ ದಾನಿಗಳಿಂದ ಸ್ವೀಕರಿಸಿದ ರಕ್ತವನ್ನು ಸಂರಕ್ಷಿಸಿಕೊಳ್ಳುವುದು ಅಷ್ಟೇ ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸಾಕಷ್ಟು ಬ್ಲಡ್ ಬ್ಯಾಂಕ್‌ಗಳಿದ್ದರೂ, ಸ್ವಯಂ ಸೇವಾ ಸಂಸ್ಥೆಯೊಂದರ ಮೂಲಕ ಖಾಸಗಿಯಾಗಿ ಮತ್ತು ಸ್ವತಂತ್ರವಾಗಿ ನಡೆಸುವ ಏಕೈಕ ಬ್ಲಡ್ ಬ್ಯಾಂಕ್ ಪುತ್ತೂರಿನಲ್ಲಿ ಮಾತ್ರವಿದೆ. ಅದೀಗ ಮೇಲ್ದರ್ಜೆಗೇರಿರುವುದು ಸಂತಸದ ವಿಚಾರ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಗುರುವಾರ ಇಲ್ಲಿನ ಜೈನ ಭವನದಲ್ಲಿ ನಡೆದ ಮೇಲ್ದರ್ಜೆಗೇರಿದ ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ಲೋಕಾರ್ಪಣಾ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

 ಮಂಗಳೂರಿನಲ್ಲಿ ಎಂಟು ಮೆಡಿಕಲ್ ಕಾಲೇಜುಗಳಿದ್ದು, ಇನ್ನೆರಡು ಪ್ರಗತಿಯಲ್ಲಿವೆ. ಐದು ವಿಶ್ವ ವಿದ್ಯಾನಿಲಯಗಳು, 13 ದಂತ ಮಹಾ ವಿದ್ಯಾಲಯಗಳು, 22 ನರ್ಸಿಂಗ್ ಕಾಲೇಜುಗಳಿವೆ. ಇದಲ್ಲದೆ ಮಂಗಳೂರು ಹೊರತುಪಡಿಸಿ ಪುತ್ತೂರಿನಲ್ಲಿ ಸಾಕಷ್ಟು ಆಸ್ಪತ್ರೆಗಳಿದ್ದು, ಅತ್ಯಂತ ಕಡಿಮೆ ದರದ ವೈದ್ಯಕೀಯ ಸೇವೆ ಪುತ್ತೂರಿನಲ್ಲಿ ಸಿಗುತ್ತಿದೆ. ವೈದ್ಯಕೀಯ ಸೇವೆಗೆ ಇಡೀ ದೇಶದಲ್ಲೇ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಆಧುನಿಕ ಆಸ್ಪತ್ರೆಗಳ ತವರೂರಾಗಿ ಮಾರ್ಪಟ್ಟಿರುವ ಕಾರಣ ರಾಷ್ಟ್ರಮಟ್ಟದಲ್ಲಿ ಮೆಡಿಕಲ್ ಟೂರಿಸಂಗೆ ಮಂಗಳೂರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಪುಣ್ಯ ಕ್ಷೇತ್ರಗಳ ನಾಡಾಗಿ, ಎಜುಕೇಶನಲ್ ಹಬ್ ಆಗಿ ಮೆರೆಯುತ್ತಿರುವ ಮಂಗಳೂರಿಗೆ ಇದು ಇನ್ನೊಂದು ಕೀರ್ತಿಯಾಗಲಿದೆ ಎಂದು ಅವರು ಹೇಳಿದರು.

ಮೇಲ್ದರ್ಜೆಗೇರಿದ ಬ್ಲಡ್ ಬ್ಯಾಂಕ್ ಉದ್ಘಾಟಿಸಿದ ರೋಟರಿ ಇಂಟರ್‌ನ್ಯಾಶನಲ್ 3181 ಜಿಲ್ಲೆಯ ಗವರ್ನರ್ ಡಾ.ಆರ್.ಎಸ್. ನಾಗಾರ್ಜುನ ಅವರು ಮಾತನಾಡಿ ಪುತ್ತೂರಿನ ಬ್ಲಡ್‌ಬ್ಯಾಂಕ್ ಇಡೀ ರೋಟರಿ ಸಂಸ್ಥೆಗೆ ಒಂದು ಹೆಮ್ಮೆಯಾಗಿದೆ. ರೋಟರಿ ಜಿಲ್ಲೆ 3181ರಲ್ಲಿ ಪುತ್ತೂರು ಮತ್ತು ಮಂಡ್ಯದಲ್ಲಿ ಮಾತ್ರ ಬ್ಲಡ್‌ಬ್ಯಾಂಕ್ ಇದೆ. ಪುತ್ತೂರು ರೋಟರಿಗೆ 25,000 ಡಾಲರ್ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

 ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಬ್ಲಡ್ ಬ್ಯಾಂಕ್‌ಗೆ ಅನುದಾನ ನೀಡುವಂತೆ ಸಂಸ್ಥೆಯವರು ಈಗಾಗಲೇ ಮನವಿ ಮಾಡಿದ್ದಾರೆ. ಆದರೆ ಶಾಸಕರ ಅನುದಾನದಿಂದ ನೀಡಲು ತಾಂತ್ರಿಕ ತೊಂದರೆಗಳಿದ್ದ ಕಾರಣ ಉಡುಪಿ ಜಿಲ್ಲೆಯ ನಂದಿಕೂರಿನ ಯುಪಿಸಿಎಲ್ ಕಂಪನಿಯಿಂದ 10 ಲಕ್ಷ ನಿಧಿ ಒದಗಿಸುವಂತೆ ವಿನಂತಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ರೋಟರಿ ಇಂಟರ್‌ನ್ಯಾಶನಲ್‌ನ 3181 ಜಿಲ್ಲೆಯ ಡಿಆರ್‌ಎಫ್‌ಸಿ ಕೃಷ್ಣ ಶೆಟ್ಟಿ, ರೋಟರಿ ಸಂಸ್ಥೆಯ ಪ್ರಮುಖರಾದ ಬಲರಾಮ ಆಚಾರ್ಯ, ಝೇವಿಯರ್ ಡಿಸೋಜ ಎಂ.ಜಿ. ರಫೀಕ್ ಶ್ಯಾಮ್ ಸುಂದರ್ ರೈ, ಡಾ.ಶ್ಯಾಮ್ ಮತ್ತು ಆಸ್ಕರ್ ಆನಂದ್ ಮಾತನಾಡಿದರು.

ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಅಶೋಕ್ ಪಡಿವಾಳ್ ಸ್ವಾಗತಿಸಿದರು. ಜಗಜೀವನದಾಸ್ ರೈ ವಂದಿಸಿದರು. ಸುರೇಶ್ ಶೆಟ್ಟಿ ಮತ್ತು ಡಾ.ಸುಧಾ ಎಸ್. ರಾವ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News