×
Ad

ತರಬೇತಿ ಪಡೆದವರಿಗೆ ಸರಕಾರದಿಂದ ಸರ್ಟಿಫಿಕೇಟ್: ಸಚಿವ ರೈ

Update: 2017-05-15 16:58 IST

ಮಂಗಳೂರು, ಮೇ 15: ರಾಜ್ಯದ 5 ಲಕ್ಷ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ದಿ ಕಾರ್ಯಕ್ರಮದ ಮೂಲಕ ತರಬೇತಿ ನೀಡಲು ರಾಜ್ಯ ಸರಕಾರ ಉದ್ದೇಶಿಸಿದ್ದು, ತರಬೇತಿ ಪಡೆದವರಿಗೆ ಸರಕಾರದ ವತಿಯಿಂದ ಸರ್ಟಿಫಿಕೇಟ್ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
 

ಅವರು ಇಂದು ಮುಖ್ಯಮಂತ್ರಿಯವರ ಕೌಶಲ್ಯ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಮಂಗಳೂರು ಪುರಭವನದಲ್ಲಿ ಸೋಮವಾರ ಹಮ್ಮಿಕೊಂಡ ದ.ಕ. ಜಿಲ್ಲೆಯಲ್ಲಿ ನಿರುದ್ಯೋಗಿ ಯುವ ಜನರ ಬೇಡಿಕೆ-ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 

ತರಬೇತಿ ಪಡೆದ ಶೇ.70ರಷ್ಟು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. 16ರಿಂದ 38ರ ವಯಸ್ಸಿನ ಶಾಲೆ ಅರ್ಧದಲ್ಲಿ ತೊರೆದವರಿಗೆ, ಶಾಲೆಗೆ ಹೋಗಿ ಕೆಲಸ ಸಿಗದವರಿಗೆ ಸೇರಿದಂತೆ ಯುವಜನರಿಗೆ ಕೌಶಲ್ಯ ಯೋಜನೆಯಡಿಯಲ್ಲಿ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ಪ್ರತೀ ತಾಲೂಕಿನಲ್ಲಿ ನೋಂದಣಿಗೆ ಅವಕಾಶವಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಕೆಲವರು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಬಹಳಷ್ಟು ಮಂದಿಗೆ ಅರ್ಹ ಉದ್ಯೋಗ ಸಿಗುವುದಿಲ್ಲ. ಅದಕ್ಕಾಗಿ ಕೌಶಲ್ಯ ಅಭಿವೃದ್ದಿ ತರಬೇತಿ ನೀಡಲಾಗುತ್ತದೆ. ಯುವ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಇಂದು ಕೆಲಸ ಬೇಕಾದಷ್ಟಿದೆ. ಆದರೆ ಯಾವ ಕೆಲಸಕ್ಕೆ ಯಾವ ವ್ಯಕ್ತಿಗೆ ಎಂಬುದರ ಬಗ್ಗೆ ಗೊಂದಲವಿದೆ. ಕಲಿಯುವುದು ಹಾಗೂ ಮಾಡುವ ಉದ್ಯೋಗಕ್ಕೆ ಸಂಬಂಧವೇ ಇರುವುದಿಲ್ಲ. ಈ ವ್ಯತ್ಯಾಸದಿಂದಲೇ ತೊಂದರೆಗಳಾಗುತ್ತಿವೆ. ಹೀಗಾಗಿ ನಿಮ್ಮ ನಿಮ್ಮ ಆಸಕ್ತಿ ಏನು ಎಂಬುದನ್ನು ಮೊದಲು ಗೊತ್ತುಪಡಿಸಿಕೊಂಡು ಆ ಬಳಿಕ ಅದೇ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
 

ದ.ಕ. ಜಿಲ್ಲಾಧಿಕಾರಿ ಮಾತನಾಡಿ, ಇದು ನಿರಂತರ ಕಾರ್ಯಕ್ರಮವಾಗಿದ್ದು, ಈ ಅವಧಿಯ ಬಳಿಕವೂ ಕಂಪ್ಯೂಟರ್ ಅಥವಾ ಮೊಬೈಲ್‌ನಿಂದ ವೆಬ್‌ಸೈಟ್‌ನಲ್ಲಿ ಹೆಸರು, ವಿವರ ನೋಂದಾಯಿಸಬಹುದು. ಹೆಸರು ನೋಂದಣಿ ಮಾಡುವಾಗ ನಿಮ್ಮ ಆಧಾರ್ ಸಂಖ್ಯೆ ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಂಗಳೂರು ತಾ.ಪಂ.ಅಧ್ಯಕ್ಷ ಮುಹಮ್ಮದ್ ಮೋನು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎ.ಮಹಮ್ಮದ್ ಹನೀಫ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಉಪಕಾರ್ಯದರ್ಶಿ ಉಮೇಶ್, ಮಂಗಳೂರು ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಉಪ ಆಯುಕ್ತ ಗೋಕುಲ್‌ದಾಸ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 ಶಿಕ್ಷಣದ ಅರ್ಹತೆ ಅಗತ್ಯವಿಲ್ಲ: ಡಾ. ಜಗದೀಶ್
16 ವಯಸ್ಸಿಗಿಂತ ಮೇಲ್ಪಟ್ಟವರು ತಮಗೆ ಯಾವುದಾದರೂ ಉದ್ಯೋಗದ ತರಬೇತಿ ಅಗತ್ಯವಿದ್ದಲ್ಲಿ ಅಂತಹ ತರಬೇತಿಯನ್ನು ರಾಜ್ಯ ಸರಕಾರವು ಉಚಿತವಾಗಿ ನೀಡಲಿದೆ. ವಿಶೇಷತೆಯೆಂದರೆ ಈ ಯೋಜನೆಗೆ ಹೆಸರು ನೋಂದಾಯಿಸಲು ಯಾವುದೇ ಶಿಕ್ಷಣದ ಅರ್ಹತೆ ಬೇಕಾಗಿಲ್ಲ. ಶಾಲೆಗೆ ಹೋಗದ ಅನಕ್ಷರಸ್ಥರೂ ಅಥವಾ ಅಲ್ಪ ಶಿಕ್ಷಣ ಕಲಿತವರು, ಪಿಯುಸಿ ಅಥವಾ ಡಿಗ್ರಿ ಆದವರೂ ಹೆಸರು ನೋಂದಾಯಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ತಿಳಿಸಿದರು.
   

ಯೋಜನೆಯಲ್ಲಿ ಹೆಸರು ನೋಂದಣಿಗಾಗಿ ರಾಜ್ಯ ಸರಕಾರ ವೆಬ್‌ಸೈಟ್ kaushalkar.com ನಲ್ಲಿ ಅಭ್ಯರ್ಥಿಯ ಎಲ್ಲಾ ವಿವರಗಳ ನೋಂದಣಿ ಮಾಡಬೇಕು. ಯೋಜನೆಯ ವಿಶೇಷ ಅಭಿಯಾನದ ಅಂಗವಾಗಿ ಮೇ 15ರಿಂದ 27ರವರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಕೌಶಲ್ಯ ಆಸಕ್ತರು ಹೆಸರು ನೋಂದಾಯಿಸಲು ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಮಂಗಳೂರು ಕಾರ್‌ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ( ಸ್ಕೂಲ್ ಬುಕ್ ಕಂಪೆನಿ ಸಮೀಪ) ನೋಂದಣಿಗೆ ಅವಕಾಶವಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News