×
Ad

ಪ್ರಧಾನಿಗೆ ಪತ್ರ ಬರೆದರೆ ರಸ್ತೆಯಾಗದು: ಸಚಿವ ರೈ

Update: 2017-05-17 20:55 IST

ಬಂಟ್ವಾಳ, ಮೇ 17: ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪ್ರಧಾನ ಮಂತ್ರಿಗೆ ಪತ್ರ ಬರೆಯುವುದಾದರೆ ದೇಶದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಹಾಗೂ ವಿಧಾನಸಭೆ ಇರುವ ಅಗತ್ಯ ಏನು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರೋಧ ಪಕ್ಷದ ಮುಖಂಡರಿಗೆ ಚಾಠಿ ಬೀಸಿದ್ದಾರೆ.

ತಾಲೂಕಿನ ನರಿಕೊಂಬು ಗ್ರಾಮದ ಬೋಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ 5.92 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ’ಗಾಂಧಿ ಪಥ-ಗ್ರಾಮ ಪಥ’ ರಸ್ತೆ ಅಭಿವೃದ್ಧಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಬಹುತೇಕ ರಸ್ತೆ ಕಾಮಗಾರಿ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದೆ. ಆದರೆ ಕೆಲವೊಂದು ರಾಜಕೀಯ ಪ್ರೇರಿತ ವ್ಯಕ್ತಿಗಳು ಜನಸಾಮಾನ್ಯರ ಗಮನ ಬೇರೆಡೆಗೆ ಸೆಳೆಯುವುದಕ್ಕಾಗಿ ರಸ್ತೆ ದುರಸ್ಥಿಪಡಿಸಲು ಪ್ರಧಾನಿಗೆ ಪತ್ರ ಬರೆದು, ಪುಕ್ಕಟೆ ಪ್ರಚಾರ ತಂತ್ರ ಅನುಸರಿಸುತ್ತಿದ್ದಾರೆ. ಇಂತಹ ಪತ್ರಗಳಿಂದ ಯಾವುದೇ ರಸ್ತೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮೇಲ್ಕಾರ್ ಬಿರ್ವ ಸೆಂಟರ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರ್‌ಟಿಒ ಕಚೇರಿ ತೆರೆಯಲಾಗುತ್ತಿದ್ದು ಬಿ.ಸಿ.ರೋಡ್- ಪಾಣೆಮಂಗಳೂರು- ನಂದಾವರ ಕ್ಷೇತ್ರ ಸಂಪರ್ಕಕ್ಕಾಗಿ ನೇತ್ರಾವತಿ ನದಿ ತೀರದಲ್ಲಿ ಸರ್ವ ಋತು ರಸ್ತೆ ನಿರ್ಮಾಣಗೊಳ್ಳಲಿದೆ. ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯ ವೃತ್ತದಿಂದ ಜಕ್ರಿಬೆಟ್ಟು ತನಕ ಆರು ಪಥದಲ್ಲಿ ರಸ್ತೆ ಅಭಿವೃದ್ಧಿಗೊಳ್ಳಲಿದ್ದು, 37 ಕೋಟಿ ರೂ. ವೆಚ್ಚದಲ್ಲಿ ಅಜಿಲಮೊಗರು-ಕಡೇಶ್ವಾಲ್ಯ ಸಂಪರ್ಕ ಸೇತುವೆ ಕಾಮಗಾರಿಯೂ ನಡೆಯಲಿದೆ ಎಂದು ಅವರು ವಿವರಿಸಿದರು.

ಈಗಾಗಲೇ ನರಿಕೊಂಬು ಗ್ರಾಮದ ಪಾಣೆಮಂಗಳೂರು-ಕರ್ಬೆಟ್ಟು ರಸ್ತೆಯನ್ನು ’ನಮ್ಮ ಗ್ರಾಮ ನಮ್ಮ ರಸ್ತೆ’ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಇದೀಗ 5.92 ಕೋಟಿ ರೂ. ವೆಚ್ಚದಲ್ಲಿ 9 ಮೀಟರ್ ವಿಸ್ತಾರದಲ್ಲಿ ನಿನ್ನಿಪಡ್ಪು-ಬೋಳಂತೂರು ರಸ್ತೆ ಅಭಿವೃದ್ಧಿಗೊಳ್ಳಲಿದೆ. ಮುಂದಿನ 11 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮುಂದಿನ ಐದು ವರ್ಷಗಳ ತನಕ ರಸ್ತೆಯ ಮೇಲುಸ್ತುವಾರಿ ಹೊಣೆ ಗುತ್ತಿಗೆದಾರರಿಗೆ ವಹಿಸಲಾಗಿದೆ. 12 ಕೋಟಿ ರೂ. ವೆಚ್ಚದಲ್ಲಿ ನರಿಕೊಂಬು ಮತ್ತು ಶಂಭೂರು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಸಚಿವರು ತಿಳಿಸಿದರು. 

ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ. ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮುಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯ ಕಿಶೋರ್ ಶೆಟ್ಟಿ ಅಂತರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಎಂಜಿನಿಯರ್ ಜಯಾನಂದ ಪೂಜಾರಿ, ಪ್ರಮುಖರಾದ ಅಲೋನ್ಸ್ ಮಿನೇಜಸ್, ರವೀಂದ್ರ ಸಪಲ್ಯ, ಮಾಧವ ಕರ್ಬೆಟ್ಟು, ಪ್ರೇಮನಾಥ ಶೆಟ್ಟಿ, ಕೃಷ್ಣಪ್ಪ ಪೂಜಾರಿ ನಾಟಿ, ಸುಲೈಮಾನ್, ವಿಶ್ವನಾಥ ಪೂಜಾರಿ, ತ್ರಿವೇಣಿ ಮತ್ತಿತರರು ಇದ್ದರು.

ಪುರೋಹಿತ ಕೇಶವ ಶಾಂತಿ ಧಾರ್ಮಿಕ ವಿಧಿ ನೆರವೇರಿಸಿದರು. ಎನ್. ಪ್ರಕಾಶ್ ಕಾರಂತ ಪ್ರಾಸ್ತಾವಿಕ ಮಾತನಾಡಿದರು. ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕೆ.ಡಿ.ಪಿ. ಸದಸ್ಯ ಉಮೇಶ್ ಬೋಳಂತೂರು ಸ್ವಾಗತಿಸಿ, ಆಲ್ಬರ್ಟ್ ಮಿನೇಜಸ್ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News