ಟಿಪ್ಪು ಸುಲ್ತಾನ್ ಕೋಟೆ ಕೆಡವಿ ಫ್ಲ್ಯಾಟ್ ನಿರ್ಮಾಣ : ಪುರಸಭೆಯಲ್ಲಿ ಆರೋಪ
Update: 2017-05-17 17:02 GMT
ಮೂಡುಬಿದಿರೆ, ಮೇ 17: ಕೋಟೆಬಾಗಿಲಿನಲ್ಲಿರುವ ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣಗೊಂಡಿದ್ದ ಭವ್ಯ ಕೋಟೆಯನ್ನು ನಾಶಗೊಳಿಸಿ ಅದರ ಮೇಲೆ ಮನೆ ಹಾಗು ಫ್ಲ್ಯಾಟ್ಗಳ ನಿರ್ಮಿಸಿರುವ ಬಗ್ಗೆ ಬುಧವಾರ ನಡೆದ ಪುರಸಭೆಯ ಅಧಿವೇಶನದಲ್ಲಿ ಧ್ವನಿಯೆತ್ತಿರುವ ಸಿಐಟಿಯು ನಾಯಕಿ ಹಾಗೂ ಪುರಸಭೆಯ ಸದಸ್ಯೆ ರಮಣಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಐತಿಹಾಸಿಕ ಸ್ಥಳವೊಂದನ್ನು ನಾಶಗೊಳಿಸಿ ಅದರ ಮೇಲೆ ಮನೆ ಹಾಗೂ ಫ್ಲ್ಯಾಟ್ಗಳ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಯಾವುದಾದರೂ ಗೋರಿ ಎದುರು ಕಟ್ಟಡ ನಿರ್ಮಾಣ ಮಾಡಿದರೆ ಕಾನೂನಿನ ನೆಪವೊಡ್ಡಿ ಕಟ್ಟಡ ಕೆಡಹುವ ಅಧಿಕಾರಿಗಳು ಟಿಪ್ಪು ಕೋಟೆಯ ವಿಚಾರದಲ್ಲಿ ಜಾಣ ಮೌನವಹಿಸಿರುವುದೇಕೆ? ಎಂದು ರಮಣಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪುರಸಭೆಯ ಮುಖ್ಯಾಧಿಕಾರಿ ಶೀನ ನಾಯ್ಕಾ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.