ಹಿಫ್ಳುಲ್ ಕುರ್ಆನ್ ಅರೆಬಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಸನದುದಾನ
ಮಂಗಳೂರು, ಮೇ 18: ನಗರದ ಬಂದರ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಅಧೀನದಲ್ಲಿರುವ ಜಲಾಲ್ ಮಸ್ತಾನ್ ಮುಹಮ್ಮದ್ ಮೌಲಾ ಹಿಫ್ಳುಲ್ ಕುರ್ಆನ್ ಹಾಗೂ ಅರೆಬಿಕ್ ಕಾಲೇಜಿನ ಮೊದಲ ಅಂತಸ್ತಿನ ಕಟ್ಟಡದ ಉದ್ಘಾಟನೆ ಹಾಗೂ ಕುರ್ಆನ್ ಕಂಠಪಾಠ ಮಾಡಿದ 6 ವಿದ್ಯಾರ್ಥಿಗಳಿಗೆ ಹಾಫಿಲ್ ಬಿರುದು ಪ್ರದಾನ ಕಾರ್ಯಕ್ರಮವು ಗುರುವಾರ ನಡೆಯಿತು.
ಕಟ್ಟಡ ಹಾಗು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕುರ್ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿಗಳು ಸಮುದಾಯದ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಝೀನತ್ ಭಕ್ಷ್ ಹಾಗು ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ವೈ.ಅಬ್ದುಲ್ಲ ಕುಂಞಿ ಸದ್ರಿ ಕಾಲೇಜಿನಲ್ಲಿ ಕುರ್ಆನ್ ಕಂಠಪಾಠವಲ್ಲದೆ ಲೌಕಿಕ ಶಿಕ್ಷಣಕ್ಕೂ ಒತ್ತು ನೀಡುತ್ತಿವೆ. ಕೇವಲ ಶಿಕ್ಷಣ ಪಡೆದರೆ ಸಾಲದು, ಬದುಕಿನಲ್ಲಿ ಶಿಸ್ತು ಪಾಲಿಸಬೇಕು. ಅದು ಎಲ್ಲ ಸಾಧನೆಗೂ ಮೈಲುಗಲ್ಲಾಗಬೇಕು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ಈವರಗೆ ಸದ್ರಿ ಕಾಲೇಜಿನಲ್ಲಿ 31 ವಿದ್ಯಾರ್ಥಿಗಳು ಹಾಫಿಳ್ಗಳಾಗಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆ ತರುವ ವಿಚಾರವಾಗಿದೆ. ಕಳೆದ ವರ್ಷ ಹಾಫಿಳ್ ಮಾಡುತ್ತಿದ್ದ 9 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ವರ್ಷ 22 ವಿದ್ಯಾರ್ಥಿಗಳು ಪ್ರವೇಶಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಕಾಲೇಜಿನ ಮುನ್ನಡೆಗೆ ಸಮುದಾಯದ ಸಹಕಾರ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಟ್ರಸ್ಟಿಗಳಾದ ಹಾಜಿ ಮುಹಮ್ಮದ್ ಹನೀಫ್, ಸೈಯದ್ ಅಹ್ಮದ್ ಬಾಷಾ ತಂಙಳ್, ಕೇಂದ್ರ ಜುಮಾ ಮಸೀದಿಯ ಖತೀಬ್ ವಿ.ಕೆ. ಸ್ವದಕತುಲ್ಲಾ ಫೈಝಿ, ಹಿಫ್ಳುಲ್ ಕುರ್ಆನ್ ಕಾಲೇಜಿನ ಪ್ರಾಂಶುಪಾಲ ಅಮೀನ್ ಹುದವಿ, ಕಾಲೇಜಿನ ಅಧ್ಯಾಪಕ ಶಕೀಲ್ ಅಹ್ಮದ್, ಮಾಜಿ ಮೇಯರ್ ಕೆ.ಅಶ್ರಫ್, ನಾಸಿರ್ ಬಂದರ್, ಎಫ್.ಎ. ಅಹ್ಮದ್, ಸಂಸ್ಥೆಯ ಮ್ಯಾನೇಜರ್ ಅಬ್ದುರ್ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾವೂರಿನ ಸೈಫುದ್ದೀನ್ ಬಾದ್ಷಾ, ವಿಟ್ಲದ ಮುಹಮ್ಮದ್ ಅನ್ವರ್, ಬಜ್ಪೆಯ ಮುಹಮ್ಮದ್ ಶಫೀಲ್, ಫಳ್ನೀರ್ನ ಅಬ್ದುಲ್ಲಾ ಫತ್ವೀನ್, ಬಂಟ್ವಾಳದ ಮುಹಮ್ಮದ್ ಹಾಶಿಮ್, ಮುಹಮ್ಮದ್ ಅಜ್ಮಾಲ್ರಿಗೆ ಸನದುದಾನ ಪ್ರದಾನ ಮಾಡಲಾಯಿತು.