ಮೇ 29: ಬೆಳ್ತಂಗಡಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಜನ್ಮದಿನಾಚರಣೆ
ಬೆಳ್ತಂಗಡಿ, ಮೇ 20: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ಅಂಬೇಡ್ಕರ್ ಜನ್ಮಾ ದಿನಾಚರಣೆ ಸಮಿತಿ ಬೆಳ್ತಂಗಡಿ ತಾಲೂಕು ಇದರ ಜಂಟಿ ಆಶ್ರಯದಲ್ಲಿ ವಿಶ್ವಕ್ಕೆ ಶಾಂತಿಯ ಸಂದೇಶಗಳನ್ನು ಸಾರಿದ ಮಾನವತವಾದಿಗಳಾದ ಬುದ್ಧ, ಬಸವ, ಅಂಬೇಡ್ಕರ್ರವರ ಜನ್ಮದಿನಾಚರಣೆಯನ್ನು ಬೆಳ್ತಂಗಡಿಯ ಅಂಬೇಡ್ಕರ್ ಭವನದ ವಠಾರದಲ್ಲಿ ಸೋಮಶೇಖರ್ ಬಿಲ್ಲವ ವೇದಿಕೆಯಲ್ಲಿ ಮೇ 29 ರಂದು ನಡೆಯಲಿದೆ ಎಂದು ಆಚರಣಾ ಸಮಿತಿಯ ಅಧ್ಯಕ್ಷ ಬಿ. ಕೆ. ವಸಂತ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನಿಡಿದರು.
ಬೆಳ್ತಂಗಡಿ ತಾಲೂಕಿನ ಪ್ರಪ್ರಥಮ ಬಾರಿಗೆ ಎಲ್ಲಾ ಶೋಷಿತ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ಅಂಬೇಡ್ಕರ್ ಚಿಂತನೆಯಲ್ಲಿ ಮುನ್ನಡೆಸುವ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಲಿತರನ್ನು, ಶೋಷಿತರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಉನ್ನತ್ತಿಗೇರಿಸಲು ಸರ್ಕಾರದ ಒತ್ತಾಯಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾಲೂಕಿನಲ್ಲಿ ದಲಿತ ಚಳುವಳಿಯನ್ನು ಕಟ್ಟಿ ಮುನ್ನಡೆಸಿದ ಹಿರಿಯ ದಲಿತ ಮುಖಂಡರುಗಳನ್ನು, ಪ.ಜಾತಿ, ಪ.ಪಂಗಡದಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನು ಮತ್ತು ಈ ಬಾರಿಯ ಎಸೆಸೆಎಲ್ಸಿ, ಪಿಯುಸಿ ಪರೀಕ್ಷೇಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಾಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಮೊದಲಿಗೆ ಬೆಳ್ತಂಗಡಿಯ ಚರ್ಚ್ರೋಡ್ ಬಳಿಯಿಂದ ಕಾರ್ಯಕ್ರಮದ ವೇದಿಕೆ ತನಕ ಮೆರವಣಿಗೆ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಮೈಸೂರಿನ ಉರಿಲಿಂಗಪೆದ್ದಿ ಮಠದ ಮಠಾಧೀಶರಾದ ಜ್ಞಾನಪ್ರಕಾಶ ಸ್ವಾಮೀಜಿಯವರು, ಡಿ.ಎಸ್.ಎಸ್ (ಅಂ.ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಚಾಲಕ ವೆಂಕಣ್ಣ ಕೊಯ್ಯೂರು ವಹಿಸಲಿದ್ದಾರೆ.
ಶಾಸಕ ಕೆ. ವಸಂತ ಬಂಗೇರ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಸಂಚಾಲಕ ರೋಹಿತಾಕ್ಷ. ಕೆ., ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ, ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಎಸ್.ಆರ್.ಲಕ್ಷ್ಮಣ್, ಬೆಳ್ತಂಗಡಿ ಪ. ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಜಯಕೀರ್ತಿ ಜೈನ್, ಬೆಳ್ತಂಗಡಿ ಹೋಲಿ ರೆಡಿಮಾರ್ ಅಂ. ಮಾ. ಶಾಲೆಯ ಮುಖ್ಯೋಪಾಧ್ಯಾಯ ಫಾ. ಅನಿಲ್ ಡಿಸಿಲ್ವಾ, ಮಂಗಳೂರು ಚೊಕ್ಕಬೆಟ್ಟುವಿನ ಅಬ್ದುಲ್ ಅಝೀಝ್ ದಾರಿಮಿ ಬೆಳ್ತಂಗಡಿ, ತಹಶೀಲ್ದಾರ್ ತಿಪ್ಪೆಸ್ವಾಮಿ, ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಸಿ.ಆರ್.ನರೇಂದ್ರ, ವಿವಿಧ ಸಂಘಟನೆಯ ಮುಖಂಡರಾದ ಸರಸ್ವತಿ, ಅಭಿನಂದನ್ ಕೊಕ್ರಾಡಿ, ಸೇಸಪ್ಪ. ಕೆ., ಗೋಪಾಲಕೃಷ್ಣ ಕುಕ್ಕಳ, ನೋಣಯ್ಯ ಮಚ್ಚಿನ, ಐ.ಎನ್.ವೆಂಕಪ್ಪ ನಾಯ್ಕ, ಕೊರಗಪ್ಪ. ಕೆ., ಶೇಖರ್.ಎಲ್, ಉದಯ ಕುಮಾರ್ ಲಾಯಿಲ ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬೆಳ್ತಂಗಡಿ ಡಿಎಸ್ಎಸ್ ಸಂಚಾಲಕ ವೆಂಕಣ್ಣ ಕೊಯ್ಯೂರು, ಮೈಸೂರು ವಿಭಾಗೀಯ ಸಂ.ಸಂಚಾಲಕ ಚಂದ್ ಎಲ್., ತಾ ಸಂ. ಸಂಚಾಲಕ ನೇಮಿರಾಜ್ ಕಿಲ್ಲೂರು, ಕೋಶಾಧಿಕಾರಿ ಜಯನಂದ. ಕೆ, ದಿನಾಚರಣೆ ಸಮಿತಿಯ ಕೋಶಾಧಿಕಾರಿ ರವಿಚಂದ್ರ ನಾಯ್ಕ ಮುಂಡಾಜೆ, ಪ್ರಚಾರ ಸಮಿತಿ ಅಧ್ಯಕ್ಷ ಎನ್.ಸಿ. ಸಂಜೀವ, ಸದಸ್ಯ ಆನಂದ ನೆಲ್ಲಿಂಗೇರಿ ಇದ್ದರು.