ಮೇ 28: ಶ್ರೀಯಾನ್ರ ಆತ್ಮಕತೆ ಲೋಕಾರ್ಪಣೆ
ಮಂಗಳೂರು, ಮೇ 20: ಸಿಪಿಎಂ ಪಕ್ಷದ ಹಿರಿಯ ಮುಖಂಡ ಕೆ.ಆರ್. ಶ್ರೀಯಾನ್ ಅವರ ‘ನನ್ನ ಜೀವನದ ಕಥನದ ನೆನಪಿನಂಗಳದಲ್ಲಿ’ ಎಂಬ ಆತ್ಮಕಥನವನ್ನು ಮೇ 28ರಂದು ಬೆಳಗ್ಗೆ 10 ಗಂಟೆಗೆ ನಗರದ ಪುರಭವನದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಕೆ.ಆರ್.ಶ್ರೀಯಾನ್ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಯಶವಂತ ಮರೋಳಿ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆತ್ಮಕತೆಯಲ್ಲಿ ಜಿಲ್ಲೆಯ ಕಳೆದ 80 ವರ್ಷಗಳ ರಾಜಕೀಯ ಆಗುಹೋಗುಗಳ ಬಗ್ಗೆ ಒಳನೋಟದಿಂದ ಕೂಡಿದ ಇತಿಹಾಸವನ್ನು ದಾಖಲಿಸಿದ್ದಾರೆ. ಸಿಪಿಎಂ ಪಕ್ಷದ ರಾಜ್ಯ ಸಮಿತಿಯಲ್ಲಿ 36 ವರ್ಷ ಕಾರ್ಯ ನಿರ್ವಹಿಸಿದ್ದರಿಂದ ಅವರು ನಿರೂಪಿಸಿರುವ ವಿದ್ಯಮಾನಗಳು ರಾಜ್ಯವ್ಯಾಪ್ತಿಗೆ ವಿಸ್ತರಿಸಿದೆ.ಅವಿಭಜಿತ ದ.ಕ. ಜಿಲ್ಲೆಯ ಕಮ್ಯೂನಿಸ್ಟ್ ಚಳವಳಿಯಲ್ಲಿ ಶ್ರೀಯಾನ್ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ರಾಜಕೀಯ ತಲ್ಲಣ ಹಾಗೂ ಪರಿವರ್ತನೆಗಳನ್ನು ಒಳಗಿನಿಂದಲೂ ಬಲ್ಲವರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ವಹಿಸುವರು. ಪುಸ್ತಕದ ಕುರಿತು ವಿದ್ವಾಂಸ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ಭಾಸ್ಕರ್ ಮಯ್ಯ ವಿಚಾರ ಮಂಡಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ಎಂ.ಅಮರನಾಥ ಶೆಟ್ಟಿ, ಸಿಪಿಐ ಅವಿಭಜಿತ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಕುಕ್ಯಾನ್, ಉದ್ಯಮಿಗಳಾದ ಹರೀಶ್ ಶೇರಿಗಾರ್, ಶ್ರೀನಿವಾಸ್ ಶೇರಿಗಾರ್, ರಂಗಭೂಮಿ ಮತ್ತು ಸಿನೆಮಾ ಕಲಾವಿದೆ ಸರೋಜಿನಿ ಶೆಟ್ಟಿ, ಕ್ರಿಯಾ ಪ್ರಕಾಶನದ ಎನ್.ಕೆ. ವಸಂತರಾಜ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆ.ಆರ್. ಶ್ರೀಯಾನ್ ಅಭಿನಂದನಾ ಸಮಿತಿಯ ಕಾರ್ಯದರ್ಶಿ ಸುನೀಲ್ಕುಮಾರ್ ಬಜಾಲ್, ಸದಸ್ಯರಾದ ವಾಸುದೇವ ಉಚ್ಚಿಲ, ಕೆ.ಯಾದವ ಶೆಟ್ಟಿ, ಜೆ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.