ಕುಂಜತ್ತೂರಿನಲ್ಲಿ ಅಮ್ಮಿಚ್ಚ ಸ್ಮರಣಾರ್ಥ ರಕ್ತದಾನ ಶಿಬಿರ, ಸನ್ಮಾನ
ಉಳ್ಳಾಲ ,ಮೇ 20:ಅಪಘಾತ ಮತ್ತು ತುರ್ತು ಸಂದರ್ಭ ರಕ್ತ ಅಗತ್ಯವಿದ್ದಾಗ ಯಾರೇ ದಾನ ನೀಡಿದರೂ ಜೀವ ಬದುಕಿಸಲು ಸಾಧ್ಯ, ರಕ್ತಕ್ಕೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಭಿಪ್ರಾಯಪಟ್ಟರು.
ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಖಿದ್ಮತುಲ್ ಇಸ್ಲಾಂ ಕುಂಜತ್ತೂರು ಘಟಕದ ಜಂಟಿ ಸಹಭಾಗಿತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಯ ಸಹಯೋಗದಲ್ಲಿ ಅಮ್ಮಿಚ್ಚ ಸ್ಮರಣಾರ್ಥ ಕುಂಜತ್ತೂರು ಮಾಸ್ಕೋ ಯುನಿಟಿ ಸಭಾಂಗಣದಲ್ಲಿ ಶನಿವಾರ ನಡೆದ ಬೃಹತ್ ರಕ್ತದಾನ ಶಿಬಿರ ಬತ್ತ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಮ್ಮಿಚ್ಚ ಅವರ ಮಾನವೀಯ ಸೇವೆಗೆ ಯಾವುದೂ ಸರಿಸಾಟಿಯಾಗಲಾರದು ಎನ್ನುವುದನ್ನು ಅವರು ನಿಧನರಾದ ದಿನ ಸೇರಿದ್ದ ಜನಸಮೂಹ ಸಾಕ್ಷಿಯಾಗಿತ್ತು. ಅವರ ಹೆಸರಲ್ಲಿ ನಡೆಸುವ ಕಾರ್ಯಕ್ರಮ ಅರ್ಥಪೂರ್ಣ, ಅದೇ ರೀತಿ ಟ್ರಸ್ಟ್ ಸ್ಥಾಪಿಸಿ ಸೇವೆ ಮುಂದುವರಿಸಲು ಪ್ರಯತ್ನಿಸಬೇಕು ಎಂದರು.
ಕುಂಬ್ಳೆ ಠಾಣೆಯ ನಿರೀಕ್ಷಕ ವಿ.ವಿ.ಮನೋಜ್ ಮಾತನಾಡಿ, ಅಮ್ಮಿಚ್ಚ ಅವರು ಎಲ್ಲಾ ರಂಗದಲ್ಲೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು, ಸ್ಥಳೀಯ ಪ್ರದೇಶದಲ್ಲಿ ಕೋಮು ಸಾಮರಸ್ಯ ಕದಡುವ ಸನ್ನಿವೇಶ ಬಂದಾಗ ತಕ್ಷಣವೇ ಸರಿಪಡಿಸುವ ಮೂಲಕ ಹಲವು ಗಲಭೆಗಳನ್ನು ತಪ್ಪಿಸಿದ್ದಾರೆ. ಯಾರೂ ಹತ್ತಿರಕ್ಕೂ ಸುಳಿಯದ ಪೊಲೀಸರು ಮಾಡಬೇಕಾದ ಹೆಣಗಳನ್ನು ತಾವೇ ಸಾಗಿಸುತ್ತಿದ್ದರು. ಮಂಗಳೂರು ವಿಮಾನ ದುರಂತದ ಸಂದರ್ಭದಲ್ಲಿ ಅವರ ಸೇವೆ ಮರೆಯಲಾಗದ್ದು ಎಂದು ತಿಳಿಸಿದರು.
ಸಯ್ಯದ್ ಬದ್ರುದ್ದೀನ್ ತಂಙಳ್ ಅಲ್ ಮಶ್ಹೂರ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ತಲಪಾಡಿ ತಾ.ಪಂ. ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಡಾ.ಖಾದರ್, ಕಾಸರಗೋರು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ, ಬ್ಲಾಕ್ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ, ಸಿಪಿಐ ಜತೆ ಕಾರ್ಯದರ್ಶಿ ಬಿ.ವಿ.ರಾಜನ್, ಪಿಡಿಪಿ ಜಿಲ್ಲಾ ಕಾರ್ಯದರ್ಶಿ ಎಂ.ಕೆ.ಇ.ಶರೀಫ್, ಎಸ್ಟಿಡಿಯು ಕೋಶಾಧಿಕಾರಿ ಅಬ್ದುಲ್ ಹಮೀದ್, ಮಾಜಿ ಕಬಡ್ಡಿ ಆಟಗಾರ ರಘು ಶೆಟ್ಟಿ, ಮಂಜೇಶ್ವರ ಬಿಜೆಪಿ ಅಧ್ಯಕ್ಷ ಹರಿಶ್ಚಂದ್ರ, ಖಿದ್ಮತುಲ್ ಇಸ್ಲಾಂ ಉಪಾಧ್ಯಕ್ಷ ಅಬೂಬಕ್ಕರ್, ಸಮಾಜ ಸೇವಕ ಅಕಬ್ರ್, ಸಮದ್, ಸಂಶು ಕುಂಡುಕೊಲಕ, ಬ್ಲಡ್ ಡೋನರ್ಸ್ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಯು.ಕೆ.ಸೈಫುಲ್ಲಾ ತಂಙಳ್ ಸ್ವಾಗತಿಸಿದರು. ಬ್ಲಡ್ ಡೋನರ್ಸ್ ಮಂಜೇಶ್ವರ ಸದಸ್ಯ ರಫೀಕ್ ಯು.ಎಂ. ಮೌಲಾನ ರೋಡ್ ವಂದಿಸಿದರು. ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು.