ಜಾಧವ್ ಪ್ರಕರಣ: ಐಸಿಜೆಯಲ್ಲಿ ಪಾಕ್ ಪರ ವಾದ ಮಂಡಿಸಲಿರುವ ಅಶ್ತಾರ್
Update: 2017-05-20 15:02 GMT
ಇಸ್ಲಮಾಬಾದ್, ಮೇ 20: ಭಾರತೀಯ ಪ್ರಜೆ ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಲು ಪಾಕಿಸ್ತಾನ ಸರಕಾರ ಅಟಾರ್ನಿ ಜನರಲ್ ಅಶ್ತಾರ್ ಯೂಸಫ್ ಆಲಿ ಅವರನ್ನು ನೇಮಿಸಿದೆ.
ಈ ಪ್ರಕರಣದಲ್ಲಿ ಪಾಕ್ ಪರ ವಕೀಲರಾಗಿ ಐಸಿಜೆಯಲ್ಲಿ ವಾದ ಮಂಡಿಸಿದ್ದ ಬ್ರಿಟನ್ ಮೂಲದ ಖವರ್ ಖುರೇಷಿ ಅವರ ನಿರ್ವಹಣೆ ಬಗ್ಗೆ ಪಾಕಿಸ್ತಾನದ ವಿದೇಶ ವ್ಯವಹಾರ ಇಲಾಖೆ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಪಾಕ್ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಜಾಧವ್ ಮರಣದಂಡನೆ ತೀರ್ಪಿಗೆ ಐಸಿಜೆ ಮೇ 18ರಂದು ತಡೆಯಾಜ್ಞೆ ನೀಡಿದೆ.
ಐಸಿಜೆಯಲ್ಲಿ ಯಾವ ರೀತಿ ವಾದ ಮಂಡಿಸಬೇಕು ಎಂಬ ಬಗ್ಗೆ ರಕ್ಷಣಾ ಇಲಾಖೆ ಸೇರಿದಂತೆ ಸಂಬಂಧಿತ ಎಲ್ಲರ ಜೊತೆ ಸರಕಾರ ಚರ್ಚಿಸಿ ಸಿದ್ದಗೊಳಿಸಿದೆ ಎಂದು ಯೂಸಫ್ ಆಲಿ ಹೇಳಿರುವುದಾಗಿ ಜಿಯೊ ಟಿವಿ ತಿಳಿಸಿದೆ.