ಲಕ್ಷ ಬೀಜ ದುಂಡೆ ತಯಾರಿಸುವ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ, ಮೇ 21: ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ರವಿವಾರ ಉತ್ತಿಷ್ಠ ಭಾರತ ಸಂಘಟನೆ ಹಮ್ಮಿಕೊಳ್ಳಲಾದ ಲಕ್ಷ ಬೀಜ ದುಂಡೆ ತಯಾರಿಸುವ ಕಾರ್ಯಕ್ರಮಕ್ಕೆ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಬೀಜದ ಉಂಡೆ ಕಟ್ಟಿದ ಸ್ವಾಮೀಜಿ, ನೀಲಾವರ ಗೋ ಶಾಲೆಯಲ್ಲಿ ಸದ್ಯದಲ್ಲೇ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಒಂದು ಲಕ್ಷ ಬೀಜದುಂಡೆ ಗಳನ್ನು ತಯಾರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ತದನಂತರ ಆಗಮಿಸಿದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಉಂಡೆ ಗಳನ್ನು ಆಸಕ್ತ ಭಕ್ತರಿಗೆ ವಿತರಿಸಿದರು. ಸಾವಿರಾರು ಬೀಜದುಂಡೆಗಳನ್ನು ತಯಾರಿಸಿ ಒಣಗಲು ಇಡಲಾಗಿದೆ. ಮುಂದಿನ ವಾರ ಭಕ್ತರಿಗೆ ತಲಾ ಒಂದ ರಂತೆ ವಿತರಿಸಲಾಗುತ್ತದೆ. ಮಠದ ದಿವಾನ ಎಂ.ರಘು ರಾಮಾಚಾರ್ಯ ಕಾರ್ಯಕ್ರಮದ ಮುತುವರ್ಜಿ ವಹಿಸಿದ್ದರು.
60ಕ್ಕೂ ಅಧಿಕ ಯುವಕರು ಬೆಳಗ್ಗೆಯಿಂದಲೇ ಕೆಂಪು ಮಣ್ಣಿಗೆ ಗೋ ಮೂತ್ರ, ಗೋಮಯಗಳ ಮಿಶ್ರಣ ಮಾಡಿ ಅವುಗಳನ್ನು ಉಂಡೆ ಮಾಡಿ ಅದರ ನಡುವೆ ಹೊಂಗೆ, ಪನ್ನೇರಳೆ, ಅಳಲೆ, ಅಶ್ವತ್ಥ, ಅಂಟುವಾಳ ಮೊದಲಾದ ಬೀಜಗಳನ್ನಿಟ್ಟು ಸೀಡ್ ಬಾಲ್ ತಯಾರಿಯಲ್ಲಿ ಪಾಲ್ಗೊಂಡರು. ಇದರಲ್ಲಿ ಸ್ಥಳೀಯ ಅನೇಕ ಭಕ್ತರು ಕೂಡ ಸೇರಿಕೊಂಡರು.