ಬಯಲು ಶೌಚಕ್ಕೆ ಹೋದಾಗ ಬಿದ್ದು ಗಾಯಗೊಂಡ ' ಅಮಿತಾಭ್ ಬಚ್ಚನ್' !
ಹೊಸದಿಲ್ಲಿ,ಮೇ 22 : ಕಾಂಗ್ರೆಸ್ ನಾಯಕ ಹಾಗೂ ಸಂಸದ ಅಭಿಷೇಕ್ ಮನು ಸಿಂಘ್ವಿ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ವಾರಸ್ಯಕರ ಚಿತ್ರವೊಂದನ್ನು ಶೇರ್ ಮಾಡಿದ್ದರು. ಈ ಚಿತ್ರವು ಜಾರ್ಖಂಡ್ ರಾಜಧಾನಿ ರಾಂಚಿ ನಗರ ನಿಗಮವು ನಗರದಲ್ಲಿ ಹಾಕಿದ ಪೋಸ್ಟರ್ ನದ್ದಾಗಿತ್ತು. ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ಶೋಲೆಯ ಒಂದು ದೃಶ್ಯದ ಪೋಸ್ಟರ್ ಇದಾಗಿದೆ. ಜಯ್ ಪಾತ್ರಧಾರಿ ಅಮಿತಾಭ್ ಬಚ್ಚನ್ ಗಬ್ಬರ್ ಸಿಂಗ್ ನ ಗುಂಡೇಟಿನಿಂದ ಗಾಯಗೊಂಡು ಬಿದ್ದಿರುವ ಹಾಗೂ ಅವರ ಬಳಿ ಧಾವಿಸಿ ಬಂದ ಅವರ ಸ್ನೇಹಿತ ವೀರು (ಧರ್ಮೇಂದ್ರ) ಬಂದು ಏನಾಯಿತೆಂದು ಹೇಳುವ ದೃಶ್ಯದ ಪೋಸ್ಟರ್ ಇದಾಗಿದೆ. ಚಲನಚಿತ್ರದಲ್ಲಿ ರಕ್ತದ ಮಡುವಿನಲ್ಲಿರುವ ಜಯ್ ತನಗೆ ಗಬ್ಬರ್ ಸಿಂಗ್ ಗುಂಡೇಟಿನಿಂದ ಗಾಯವಾಗಿರುವುದಾಗಿ ಹೇಳಿದಾಗ, ವೀರು, ಗೆಳೆಯಾ ನಿನಗೆ ಏನೂ ಆಗದು ಎಂದು ಹೇಳುತ್ತಾನೆ.
ಆದರೆ ರಾಂಚಿ ನಗರ ನಿಗಮದ ಪೋಸ್ಟರ್ ನಲ್ಲಿನ ಸಂಭಾಷಣೆಗಳು ಮಾತ್ರ ಬೇರೆಯೇ ಆಗಿದೆ. ಸ್ವಚ್ಛ ಭಾರತ ಅಭಿಯಾನದಂಗವಾಗಿ ಎಲ್ಲರೂ ಶೌಚಾಲಯ ಹೊಂದಬೇಕು ಎಂಬ ಉದ್ದೇಶದಿಂದ ಹಾಗೂ ಬಯಲು ಶೌಚಾಲಯದ ದುಷ್ಪರಿಣಾಮಗಳ ಬಗ್ಗೆ ಅರಿವನ್ನುಂಟು ಮಾಡುವ ಭಾಗವಾಗಿ ಈ ಪೋಸ್ಟರ್ ಕಾಣಿಸಿಕೊಂಡಿದ್ದು, ಅದರಲ್ಲಿನ ಬರಹ ರೂಪದ ಸಂಭಾಷಣೆ ಈ ರೀತಿಯಾಗಿದೆ.
ವೀರು : ಏನಾಯಿತು ಗೆಳಯಾ ? ಜಯ್ : ‘‘ಗೆಳೆಯಾ, ರಾತ್ರಿ ವೇಳೆ ಬಯಲು ಶೌಚಕ್ಕೆ ಹೋಗಿದ್ದ ವೇಳೆ ಬಿದ್ದು ಬಿಟ್ಟೆ.’’
ಈ ರೀತಿಯ ಸ್ವಾರಸ್ಯಕರ ಪೋಸ್ಟರುಗಳ ಮೂಲಕ ಜನರಲ್ಲಿ ಅರಿವನ್ನುಂಟು ಮಾಡುವ ಪ್ರಯತ್ನ ಮಾಡುತ್ತಿದೆ ರಾಂಚಿ ನಗರ್ ನಿಗಮ್.
— Abhishek Singhvi (@DrAMSinghvi) May 22, 2017