ಮದ್ಯದಂಗಡಿ ತೆರೆಯಲು ನಾಗರಿಕರಿಂದ ವಿರೋಧ: ಲಾಠಿ ಚಾರ್ಜ್
ಕಾಸರಗೋಡು, ಮೇ 22: ನಾಗರಿಕರ ವಿರೋಧದ ನಡುವೆಯೇ ಉದುಮ ಮಾಂಗಾಡ್ ನಲ್ಲಿ ಮದ್ಯದಂಗಡಿ ತೆರೆಯಲೆತ್ನಿಸಿದ ಘಟನೆ ಸೋಮವಾರ ನಡೆದಿದ್ದು , ಪ್ರತಿಭಟನೆ ನಡೆಸಿದವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದರಿಂದ ಹಲವು ಮಂದಿ ಗಾಯಗೊಂಡಿದ್ದಾರೆ. ಬಳಿಕ ಬಲವಂತವಾಗಿ ಮದ್ಯದಂಗಡಿಯನ್ನು ತೆರೆಯಲಾಯಿತು.
ಜನವಾಸ ಸ್ಥಳದಲ್ಲಿ ಮದ್ಯದಂಗಡಿ ತೆರೆಯುವುದರ ವಿರುದ್ಧ ಕಳೆದ 78 ದಿನಗಳಿಂದ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ನಡುವೆ ಸೋಮವಾರ ಬೆಳಗ್ಗೆ ಮದ್ಯ ಸಹಿತ ಬಂದ ಲಾರಿಯಿಂದ ಮದ್ಯ ಇಳಿಸುತ್ತಿದ್ದಾಗ ಪ್ರತಿಭಟನಾಕಾರು ತಡೆದಿದ್ದು , ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂದು ತಿಳಿದುಬಂದಿದೆ.
ಕಾಸರಗೋಡು ನಗರದಲ್ಲಿದ್ದ ಮದ್ಯದಂಗಡಿಯನ್ನು ಮಾಂಗಾಡ್ ಕುಳಿಕುನ್ನುಗೆ ಸ್ಥಳಾಂತರಿಸಲಾಗಿತ್ತು.
ಇದರ ವಿರುದ್ಧ ನಾಗರಿಕರು ಹೋರಾಟ ಸಮಿತಿ ರಚಿಸಿ ಯಾವುದೇ ಕಾರಣಕ್ಕೆ ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು . ಇದರಿಂದ ಸೋಮವಾರ ಬೆಳಗ್ಗೆ ಬಲವಂತವಾಗಿ ಮದ್ಯದಂಗಡಿ ತೆರೆಯಲು ತೀರ್ಮಾನಿಸಿದ್ದರು. ಇದರಂತೆ ಸ್ಥಳದಲ್ಲಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.