ರೋಗಿಗೆ ಚಿಕಿತ್ಸೆ ನೀಡಲು ನೀರಾಕರಿಸಿದ ಆಸ್ಪತ್ರೆ
ಮಂಗಳೂರು, ಮೇ 22: ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಹಮ್ಮಿಕೊಂಡಿರುವ 24 ಗಂಟೆಗಳ ಮುಷ್ಕರ ಹಿನ್ನೆಲೆಯಲ್ಲಿ ಸೋಮವಾರ ನಗರದ ಆಸ್ಪತ್ರೆಯೊಂದರಲ್ಲಿ ಅಪಘಾತಕ್ಕೊಳಗಾದ ರೋಗಿಯೊಬ್ಬರಿಗೆ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿರುವ ಘಟನೆ ನಡೆದಿದೆ.
ಅಪಘಾತಕ್ಕೊಳಗಾಗಿ ತೀವ್ರ ಗಾಯಗೊಂಡು ರಕ್ತಸ್ರಾವಗೊಂಡಿದ್ದ ರೋಗಿಯೊಬ್ಬರನ್ನು ನಗರದ ಕರಂಗಲ್ಪಾಡಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆ ತರಲಾಗಿತ್ತು. ಆದರೆ, ವೈದ್ಯರ ಸಂಘಟನೆಗಳು ಸೋಮವಾರ 24 ಗಂಟೆಗಳ ಮುಷ್ಕರಕ್ಕೆ ಕರೆ ಕೊಟ್ಟಿರುವುದರಿಂದ ಆಸ್ಪತ್ರೆಯ ವೈದ್ಯರು ಮುಷ್ಕರದ ನೆಪಯೊಡ್ಡಿ ರೋಗಿಗೆ ಚಿಕಿತ್ಸೆಯನ್ನು ನೀಡದೆ ವಾಪಾಸು ಕಳುಹಿಸಿ ಮಾನವೀಯತೆ ಮರೆತಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಮವಾರ ಕರೆ ಕೊಟ್ಟಿರುವ ವೈದ್ಯರ ಮುಷ್ಕರದಲ್ಲಿ ತುರ್ತು ಚಿಕಿತ್ಸೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಮುಷ್ಕರಕ್ಕೆ ಕರೆ ನೀಡಿದ್ದ ಸಂಘಟನೆಯು ಹೇಳಿತ್ತು. ಆದರೆ, ಅಪಘಾತಕ್ಕೀಡಾತನಿಗೆ ರಕ್ತಸ್ರಾವ ಆಗುತ್ತಿದ್ದರೂ ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿದ್ದರೂ ಆಸ್ಪತ್ರೆಯ ವೈದ್ಯರು ಮಾನವೀಯತೆಯನ್ನು ತೋರಿಸಿಲ್ಲ ಎಂದು ಆರೋಪಿಸಲಾಗಿದೆ.