ಮುಕ್ತ ಚರ್ಚೆಗೆ ಬರುವಂತೆ ಬಿಜೆಪಿ ನಾಯಕರಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ ಆಹ್ವಾನ
ಕಾಪು, ಮೇ 23: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಕ್ಷೇತ್ರ ಶಾಸಕರಾದ ವಿನಯ ಕುಮಾರ ಸೊರಕೆ ಅಭೂತ ಪೂರ್ವ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರದ ಜನರ ಆಶಯದಂತೆ ಒಬ್ಬ ಪ್ರಾಮಾಣಿಕ, ಪಾರದರ್ಶಕ, ಅಭಿವೃದ್ದಿಯ ದೂರದೃಷ್ಟಿತ್ವದ ಶಾಸಕರಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಸಾಧನೆ, ಅಭಿವೃದ್ಧಿ ಯೋಜನೆ ಬಗ್ಗೆ ನೇರ-ಮುಕ್ತ ಚರ್ಚೆಗೆ ಬರುವಂತೆ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಶೆಟ್ಟಿಯವರು ಬಿ.ಜೆ.ಪಿ. ನಾಯಕರಿಗೆ ಆಹ್ವಾನಿಸಿದ್ದಾರೆ.
ರಾಜೀವ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಅನುಷ್ಠಾನಗೊಳಿಸಿದ, ಯೋಜನೆಗಳ ದಾಖಲೆಗಳನ್ನು ಬಿ.ಜೆ.ಪಿ. ನಾಯಕರು ಬಿಡುಗಡೆಗೊಳಿಸಲಿ. ಸಂಸದರ ಸ್ಥಳೀಯಾಭಿವೃದ್ದಿ ಅನುದಾನ ಹಂಚಿಕೆಯ ವಿವರ ಬಹಿರಂಗಪಡಿಸಿ. ನಾವು ನಮ್ಮ ಶಾಸಕರು ಶಿಫಾರಸ್ಸು ಮಾಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ವಿವರಗಳನ್ನು ದಾಖಲೆ ಸಮೇತ ಬಿಡುಗಡೆಗೊಳಿಸಲು ಸಿದ್ಧರಿದ್ದೇವೆ ಎಂದರು.
ಕಾಪು ಕ್ಷೇತ್ರದ ಜನತೆಗಾಗಿ ಕುಡಿಯುವ ನೀರು, ಗ್ರಾಮೀಣ ಸಂಪರ್ಕ, ರಾಜ್ಯ ಮತ್ತು ಲೋಕೋಪಯೋಗಿ ರಸ್ತೆಗಳ ಅಭಿವೃದ್ದಿ, ರೈತರಿಗೆ ನೀರಾವರಿ ಸೌಕರ್ಯ, ಕೆರೆಗಳ ಪುನ:ಶ್ಚೇತನ, ಪ್ರವಾಸೋದ್ಯಮ ಅಭಿವೃದ್ದಿ, ಸಣ್ಣ ಕೈಗಾರಿಕೆಗಳ ಪಾರ್ಕ್, ಉನ್ನತ ಶಿಕ್ಷಣ, ಐ.ಟಿ.ಐ. ಶಿಕ್ಷಣ ಪ್ರೌಢ ಶಿಕ್ಷಣಕ್ಕೆ ಒತ್ತು, ಪರಿಶಿಷ್ಟ ಜಾತಿ, ಪಂಗಡಗಳ ಕಾಲನಿಗಳ ರಸ್ತೆಗಳ ಅಭಿವೃದ್ದಿ, ಸಮುದಾಯ ಭವನಗಳ ನಿರ್ಮಾಣ, ವಿವಿಧ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಗ್ರ ಅಭಿವೃದ್ದಿಗೆ ಚಾಲನೆ ನೀಡಲಾಗಿದ್ದು, ಸುಮಾರು 40 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಾಯಕರಾದ ಕಾಪು ಪುರಸಭೆಯ ಅಧ್ಯಕ್ಷೆ ಸೌಮ್ಯ ಸಂಜೀವ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಕಾಪು ದಿವಾಕರ ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ, ವಿನಯ ಬಲ್ಲಾಳ್, ಅಬ್ದುಲ್ ಅಝೀಝ್, ಸರಸು ಬಂಗೇರಾ, ನವೀನ್ ಎನ್.ಶೆಟ್ಟಿ, ವೈ.ಸುಕುಮಾರ್, ಎಚ್.ಅಬ್ದುಲ್ಲಾ, ಗೀತಾ ವಾಗ್ಲೆ ಮತ್ತಿತರರು ಉಪಸ್ಥಿತರಿದ್ದರು.
ಸಂಸದೆ ಶೋಭಾ ಅವರನ್ನು ಹುಡುಕಿಕೊಡಿ: ಕ್ಷೇತ್ರದಲ್ಲೆರಡು ಆದರ್ಶ ಗ್ರಾಮಗಳ ಅನುಷ್ಠಾನವಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾ ಬಂದಿದ್ದಾರೆ. ಆದರೆ ನಮ್ಮ ಸಂಸದರಾದ ಶೋಭಾ ಕರಂದ್ಲಾಜೆ ಅವರು ಕ್ಯಾರೇ ಅನ್ನುತ್ತಿಲ್ಲ. ನಮ್ಮ ಸಂಸದರನ್ನು ಹುಡುಕಿ ಕೊಡಿ ಎಂದು ಪ್ರಧಾನಿಯವರಿಗೆ ಮೇಲ್ ಕಳುಹಿಸುತ್ತೇವೆ.
ಉಡುಪಿ ಜಿಲ್ಲೆಗೆ ಅವರ ಕೊಡುಗೆ ಏನು? ಅವರ ಜನಪರ ಯೋಜನೆಗಳೇನು? ಅವರು ಸುತ್ತಿದ ಕ್ಷೇತ್ರಗಳ ಗ್ರಾಮಗಳೆಷ್ಟು ? ಜನಸಾಮಾನ್ಯರು ಅವರನ್ನು ಭೇಟಿ ಮಾಡುವುದೆಲ್ಲಿ? ಸಂಸದರ ಅನುದಾನ ಬಳಕೆಯಾಗುವುದೆಲ್ಲಿ ? ಇದನ್ನು ಬಿಜೆಪಿ ನಾಯಕರು ಬಹಿರಂಗಪಡಿಸಿ. ಇಂತಹ ಜನ ನಾಯಕರಿಂದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವೇ? ಇವರಿಗೆ ಮತದಾರರ ಬಗ್ಗೆ ಕಾಳಜಿ ಇಲ್ಲವೇ? ನಮ್ಮ ಶಾಸಕರಾದ ವಿನಯ ಕುಮಾರ್ ಸೊರಕೆಯವರನ್ನು ಟೀಕಿಸುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲವೆಂದು ನವೀನ ಚಂದ್ರ ಜೆ. ಶೆಟ್ಟಿ ತಿಳಿಸಿದ್ದಾರೆ.