ಉಡುಪಿಗೆ ಇನ್ನು 4 ದಿನಗಳಿಗೊಮ್ಮೆ ನೀರು ಪೂರೈಕೆ
ಉಡುಪಿ, ಮೇ 23: ನಿರೀಕ್ಷಿತ ಮಳೆ ಸುರಿಯದಿರುವುದರಿಂದ ಹಾಗೂ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಎ. 29ರಂದೇ ಬರಿದಾಗಿರುವುದರಿಂದ ಉಡುಪಿ ನಗರಕ್ಕೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ.
ಬಜೆ ಅಣೆಕಟ್ಟಿನ ನೀರು ಬರಿದಾದ ಬಳಿಕ ಶೀರೂರು, ಮಾಣೈ ಮಠದ ಗುಂಡಿ, ಭಂಡಾರಿಬೆಟ್ಟು, ಪುತ್ತಿಗೆ ಮಠ ಪ್ರದೇಶದ ಅಲ್ಲಲ್ಲಿ ಗುಂಡಿಗಳಲ್ಲಿ ಸಂಗ್ರಹವಿದ್ದ ನೀರನ್ನು ಬೋಟ್ ಪಂಪುಗಳ ಮುಖಾಂತರ ಪಂಪಿಂಗ್ ಮಾಡಿ ಜಲಾಶಯಕ್ಕೆ ನೀರು ಹಾಯಿಸಿ ಶುದ್ಧೀಕರಣಗೊಳಿಸಿ ಇಂದಿನವರೆಗೆ ದಿನ ಬಿಟ್ಟು ದಿನ ನೀರನ್ನು ನಗರಸಭಾ ವ್ಯಾಪ್ತಿಗೆ ನೀಡಲಾಗಿದೆ.
ಅಣೆಕಟ್ಟು ಪ್ರದೇಶದಲ್ಲಿ ಅಲ್ಲಲ್ಲಿ ಹೊಂಡದಲ್ಲಿರುವ ನೀರು ಉಡುಪಿ ನಗರಕ್ಕೆ ಕೇವಲ 7 ದಿನಗಳಿಗೆ ಮಾತ್ರ ಸಾಕಾಗುವುದರಿಂದ ಹಾಗೂ ನಿರೀಕ್ಷಿತ ಮಳೆ ಕೂಡಾ ಇನ್ನೂ ಬಾರದಿರುವುದರಿಂದ ಮಳೆಗಾಲ ಪ್ರಾರಂಭವಾಗುವ ತನಕ ಉಡುಪಿ ನಗರದ 35 ವಾರ್ಡ್ಗಳನ್ನು 2 ವಿಭಾಗಗಳಾಗಿ ವಿಂಗಡಿಸಿ ಸಂಬಂಧ ಪಟ್ಟ ವಾರ್ಡ್ಗಳಿಗೆ ಪ್ರತಿ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲು ನಿರ್ಧರಿಸಲಾಗಿದೆ ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಅದರಂತೆ ಮೇ 24, 28, ಜೂ.1 ಹಾಗೂ ಜೂನ್ 5ರಂದು ಕೊಳ, ವಡಭಾಂಡೇಶ್ವರ, ಮಲ್ಪೆಸೆಂಟ್ರಲ್, ಕೊಡವೂರು, ಕಲ್ಮಾಡಿ, ಕಸ್ತೂರ್ಬಾನಗರ, ಸಗ್ರಿ, ಮೂಡುಪೆರಂಪಳ್ಳಿ, ಇಂದಿರಾನಗರ, ಚಿಟ್ಪಾಡಿ, ಬಡಗುಬೆಟ್ಟು, ಇಂದ್ರಾಳಿ, ಶಿರಿಬೀಡು, ಬನ್ನಂಜೆ, ಅಂಬಲಪಾಡಿ, ಅಜ್ಜರಕಾಡು, ಕಿನ್ನಿಮುಲ್ಕಿ, ಬೈಲೂರು, ಒಳಕಾಡು, ತೆಂಕಪೇಟೆ, ಕುಂಜಿಬೆಟ್ಟು ವಾರ್ಡುಗಳಿಗೆ ಸರಬರಾಜು ಮಾಡಲಾಗುವುದು.
ಅದೇ ರೀತಿ ಮೇ 27, 31, ಜೂ.4 ಹಾಗೂ ಜೂ.8ರಂದು ಸರಳೆಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡುಬೆಟ್ಟು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಕಡಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು, ಪರ್ಕಳ ವಾರ್ಡುಗಳಿಗೆ ನೀರು ಪೂರೈಕೆಯಾಗಲಿದೆ.
ಈ ನಡುವೆ ಮಳೆಗಾಲ ಪ್ರಾರಂಭವಾದರೆ ಕುಡಿಯುವ ನೀರನ್ನು ಹಿಂದಿನಂತೆ ಪ್ರತಿದಿನ ಪೂರೈಸಲಾಗುವುದು. ಕುಡಿಯುವ ನೀರು ಪೂರೈಸಲು ನಿಗದಿಪಡಿಸಿದ ದಿನದಂದು ಸಂಬಂಧಪಟ್ಟ ವಾರ್ಡಿನಲ್ಲಿ ನೀರು ಬಾರದ ಪ್ರದೇಶದಲ್ಲಿ ಅಂದು ಮಾತ್ರ ಆ ಭಾಗದಲ್ಲಿ ಟ್ಯಾಂಕರ್ ನೀರನ್ನು ಪೂರೈಸಲಾಗುವುದು.
ಕುಡಿಯುವ ನೀರಿಗಾಗಿ ಬಹುಮಹಡಿ ಕಟ್ಟಡಗಳನ್ನು ಹೊರತುಪಡಿಸಿ ಗೃಹಬಳಕೆಯವರು ಮಾತ್ರ ದೂರವಾಣಿ ಸಂಖ್ಯೆ: 8496989248, 8496989166, 8496989184, 8496989122ನ್ನು ಅಥವಾ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್-8496989759, ಪರಿಸರ ಅಭಿಯಂತರ ಬಿ. ರಾಘವೇಂದ್ರ- 9448507244 ಇವರನ್ನು ಸಂಪರ್ಕಿಸಬಹುದು.
ಬಜೆ ಜಲಾಶಯದಲ್ಲಿ ನೀರಿನ ಸಂಗ್ರಹ ಬರಿದಾಗಿರುವುದರಿಂದ ಉಡುಪಿಯ ನಾಗರಿಕರು ದಯವಿಟ್ಟು ನೀರನ್ನು ಮಿತವಾಗಿ ಬಳಸಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಹಾಗೂ ಪೌರಾಯುಕ್ತ ಡಿ. ಮಂಜುನಾಥಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.