ಜೂ.3ರಿಂದ ವಸಂತೋತ್ಸವ
ಮಂಗಳೂರು, ಮೇ 24: ಪಿಲಿಕುಳದ ಅರ್ಬನ್ ಹಾಥ್ನಲ್ಲಿ ಜೂ. 3ರಿಂದ 5ರವರೆಗೆ ‘ವಸಂತೋತ್ಸವ’ ಕಾರ್ಯಕ್ರಮ ನಡೆಯಲಿದೆ.
ರಾಜ್ಯದ ವಿವಿಧ ಬಗೆಯ ಮಾವು, ಹಲಸಿನ ಹಣ್ಣುಗಳು, ಸ್ಥಳೀಯ ಮತ್ತು ದೇಶಿಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ರಾಜ್ಯ ಮೀನುಗಾರಿಕಾ ಅಭಿವೃದ್ದಿ ನಿಗಮದಿಂದ ತಾಜಾ ಮೀನುಗಳ ಮತ್ತು ಖಾದ್ಯಗಳ ಮಾರಾಟದ ವ್ಯವಸ್ಥೆ ಇದೆ.
ಸಾವಯವ ಕೃಷಿಕ ಗ್ರಾಹಕ ಬಳಗ, ಕ್ಯಾಂಪ್ಕೋ ಮತ್ತು ಕೆಎಂಎಫ್ ಕೂಡಾ ಪಾಲ್ಗೊಂಡು ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ.
ಹಣ್ಣುಗಳ ಬೀಜ, ಕೃಷಿ ಬೀಜಗಳು ಮತ್ತು ಅರಣ್ಯ ಸಸಿಗಳ ಪ್ರದರ್ಶನ ಹಾಗೂ ಮಾರಾಟ, ವಿವಿಧ ಹಣ್ಣುಗಳ ಖಾದ್ಯ, ಪಾನೀಯಗಳು ಹಾಗೂ ಸಾವಯವ ಬಳಗದ ನಿತ್ಯ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವೂ ಇದೆ.
ಪರಿಸರದಲ್ಲಿ ದೊರಕುವಂತಹ ವಿವಿಧ ಬಗೆಯ ಹಣ್ಣುಗಳ ಬಗ್ಗೆ ಯುವ ಜನಾಂಗದಲ್ಲಿ ಅರಿವನ್ನು ಮೂಡಿಸುವುದು ಮತ್ತು ಪರಿಚಯ ಮಾಡಿಸುವುದು ಮತ್ತು ರೈತರಿಗೆ ಆದ್ಯತೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಯೂ ಆದ ಪಿಲಿಕುಳ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಡಾ.ಜಗದೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.