ಅರ್ನಬ್ ಗೋಸ್ವಾಮಿ ವಿರುದ್ಧ ಶಶಿ ತರೂರ್ ಮಾನನಷ್ಟ ಮೊಕದ್ದಮೆ
Update: 2017-05-26 16:42 GMT
ಹೊಸದಿಲ್ಲಿ,ಮೇ 26: ಟಿವಿ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿರುವುದಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಶುಕ್ರವಾರ ಟ್ವೀಟಿಸಿದ್ದಾರೆ.
ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸ್ಫೋಟಕ ’ ಎಂದು ಬಣ್ಣಿಸಿದ್ದ ವರದಿಯೊಂದನ್ನು ಗೋಸ್ವಾಮಿಯವರ ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಚಾನೆಲ್ನ ವರದಿಗಾರ ಮತ್ತು ತರೂರ್ರ ಸಹಾಯಕನ ನಡುವಿನ ಸಂಭಾಷಣೆ ಎನ್ನಲಾದ ಆಡಿಯೊ ಟೇಪ್ಗಳನ್ನು ಅದು ಬಿತ್ತರಿಸಿತ್ತು. 2014,ಜ.17ರಂದು ದಿಲ್ಲಿಯ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ನಿಗೂಢ ಸಾವನ್ನಪ್ಪಿದ್ದ ಸುನಂದಾರ ಶವವನ್ನು ಅಂದು ರಾತ್ರಿ ಹೋಟೆಲ್ನ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಸಾಗಿಸಲಾಗಿತ್ತು ಎನ್ನುವುದನ್ನು ಈ ಟೇಪ್ಗಳು ಬೆಟ್ಟು ಮಾಡಿದ್ದವು. ಈ ವರದಿಯನ್ನು ಅಲ್ಲಗಳೆದಿದ್ದ ತರೂರ್, ಇದು ಸುದ್ದಿ ಚಾನೆಲ್ನತ್ತ ಜನರ ಗಮನ ಸೆಳೆಯಲು ಪ್ರಚಾರ ತಂತ್ರವಾಗಿದೆ ಎಂದು ಹೇಳಿದ್ದರು.