ಬಾಕಿ ವೇತನಕ್ಕೆ ಆಗ್ರಹಿಸಿ ಆದಿತ್ಯನಾಥ್ ಕಾರು ತಡೆದ ಆಶಾ ಕಾರ್ಯಕರ್ತೆ
ವಾರಾಣಸಿ, ಮೇ 26: ಅಝಂಗಢದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಲು ವಾಹನಗಳ ಬೆಂಗಾವಲಿನಲ್ಲಿ ಹೊರಟಿದ್ದ ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕಾರನ್ನು ಆಶಾ ಕಾರ್ಯಕರ್ತೆಯೋರ್ವರು ತಡೆದು ನಿಲ್ಲಿಸಿ ಬಾಕಿ ವೇತನಕ್ಕೆ ಆಗ್ರಹಿಸಿದ ಘಟನೆ ನಡೆದಿದೆ.
ಜಿಲ್ಲಾ ಮಹಿಳಾ ಆಸ್ಪತ್ರೆಯ ಹೊರಭಾಗದಲ್ಲಿ ಮುಖ್ಯಮಂತ್ರಿಗಳ ವಾಹನದ ಸಾಲು ಸಾಗುತ್ತಿದ್ದಾಗ ಹಠಾತ್ತನೆ ಮುಖ್ಯಮಂತ್ರಿ ಸಂಚರಿಸುತ್ತಿದ್ದ ಕಾರಿನ ಎದುರು ಧಾವಿಸಿದ ಆಶಾ ಕಾರ್ಯಕರ್ತೆ ಶುಭಾವತಿ ಎಂಬಾಕೆ , ತನಗೆ ಆರು ತಿಂಗಳಿನಿಂದ ವೇತನ ಬಾಕಿ ಇದ್ದು ತ್ವರಿತ ಪಾವತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ತಕ್ಷಣ ಚುರುಕಾದ ಭದ್ರತಾ ಸಿಬ್ಬಂದಿಗಳು ಆಕೆಯನ್ನು ಬದಿಗೆ ಸರಿಸಲು ಮುಂದಾದರು. ಈ ವೇಳೆ ಆಕೆಯ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ರನ್ನು ದೂಷಿಸಿದ ಶುಭಾವತಿ, ಆದಿತ್ಯನಾಥ್ ಬಗ್ಗೆ ತನಗೆ ಭರವಸೆ ಇದೆ ಎಂದರು.