ಸಾಮಾಜಿಕ ಜಾಲತಾಣದ ಎಫೆಕ್ಟ್: ಕಲ್ಲಡ್ಕ ಭಾಗಶಃ ಬಂದ್
* ಎಸ್ಪಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ
ಬಂಟ್ವಾಳ, ಮೇ 27: ಯುವಕರಿಬ್ಬರ ಮೇಲೆ ಚೂರಿ ಇರಿತ ನಡೆದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ‘ಕಲ್ಲಡ್ಕ ಬಂದ್’ ಮೆಸೇಜ್ ಪರಿಣಾಮ ಶನಿವಾರ ಕಲ್ಲಡ್ಕ ಭಾಗಶಃ ಬಂದ್ ಆಗಿ ಪರಿಣಿಮಿಸಿತ್ತು.
ಕಲ್ಲಡ್ಕ ಪೇಟೆ ಮತ್ತು ಪರಿಸರದ ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು. ಈ ನಡುವೆ ಬಂದ್ಗೆ ಎರಡು ಗುಂಪುಗಳ ನಡುವೆ ಪರ, ವಿರೋಧ ವ್ಯಕ್ತವಾಗಿದ್ದರಿಂದ ಕಲ್ಲಡ್ಕದಲ್ಲಿ ಕೆಲವು ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಶುಕ್ರವಾರ ಮಧ್ಯಾಹ್ನ ಕಲ್ಲಡ್ಕ ಜುಮಾ ಮಸೀದಿಯಲ್ಲಿ ನಮಾಝ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿ ಸಹಿತ ಇಬ್ಬರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾಗಿತ್ತು. ಈ ಕೃತ್ಯವನ್ನು ಖಂಡಿಸಿ ಹಾಗೂ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ‘ಕಲ್ಲಡ್ಕ ನಾಗರಿಕರು’ ಎಂಬ ಹೆಸರಿನಲ್ಲಿ ‘ಕಲ್ಲಡ್ಕ ಬಂದ್’ ಕರೆ ನೀಡಿದ್ದ ಮೆಸೇಜ್ ಶುಕ್ರವಾರ ರಾತ್ರಿ ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದರ ಪರಿಣಾಮ ಇಂದು ಕಲ್ಲಡ್ಕ ಮೇಲಿನಪೇಟೆ, ಕೆಳಗಿನಪೇಟೆ ಹಾಗೂ ಪರಿಸರದ ಅಂಗಡಿಗಳ ಮಾಲಕರು ತಮ್ಮ ಅಂಗಡಿ ಮುಂಗಟ್ಟುಗಳ ತೆರೆಯುವ ಧೈರ್ಯ ತೋರಲಿಲ್ಲ.
ಬೆರಳೆಣಿಕೆಯಷ್ಟು ಅಂಗಡಿಗಳು ಬಾಗಿಲು ತೆರೆದಿದ್ದರೂ ಗ್ರಾಹಕರು ಇಲ್ಲದೆ ಬಿಕೋ ಎನ್ನುತ್ತಿತ್ತು. ಕಲ್ಲಡ್ಕದಲ್ಲಿ ಇಂದು ಜನ ಸಂಚಾರ ತೀವ್ರ ವಿರಳವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನಗಳ ಸಂಚಾರ ಎಂದಿನಂತೆ ಇದೆ. ಆದರೆ ಕಲ್ಲಡ್ಕ-ವಿಟ್ಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿದೆ. ಆಟೋ ರಿಕ್ಷಾಗಳ ಸಹಿತ ಇತರ ಬಾಡಿಗೆ ವಾಹನಗಳು ಕೂಡಾ ಬೆಳಗ್ಗೆಯಿಂದ ರಸ್ತೆಗಿಳಿದಿಲ್ಲ.
ಬೆಳಗ್ಗೆ 8 ಗಂಟೆಯ ಸುಮಾರಿಗೆ ಕಲ್ಲಡ್ಕ ಪೇಟೆಯ ಪುತ್ತೂರು ರಸ್ತೆ ಮತ್ತು ವಿಟ್ಲ ರಸ್ತೆಯಲ್ಲಿ ನೂರಾರು ಯುವಕರಿದ್ದ ಎರಡು ಗುಂಪುಗಳು ಪ್ರತ್ಯೇಕವಾಗಿ ಸೇರಿ ಬಂದ್ಗೆ ಬೆಂಬಲ, ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ಗುಂಪೊಂದರ ಕಡೆಗೆ ಕಲ್ಲೊಂದು ತೂರಿದ್ದರಿಂದ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳದಲ್ಲಿ ಭದ್ರತಾ ನಿರತ ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ತದನಂತರ 9 ಗಂಟೆ ಸುಮಾರಿಗೆ ಕಲ್ಲಡ್ಕ ಪೇಟೆಗೆ ಆಗಮಿಸಿದ ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಹಾಗೂ ಸಂಘ ಪರಿವಾರದ ಮುಖಂಡರಿದ್ದ ತಂಡವೊಂದು ರಸ್ತೆಗಿಳಿದು ಮುಚ್ಚಿರುವ ಅಂಗಡಿಗಳನ್ನು ತೆರೆಯುವಂತೆ ಮಾಲಕರಲ್ಲಿ ಒತ್ತಾಯಿಸಿದರು. ಈ ವೇಳೆ ಒಂದೆರಡು ಅಂಗಡಿಗಳ ಮಾಲಕರು ಅಂಗಡಿಗಳ ಬಾಗಿಲು ತೆರೆದರಾದರೂ ಬಂದ್ ಬೆಂಬಲಿಗ ಗುಂಪು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮಾಲಕರು ಶಟರ್ ಎಳೆದು ಮನೆಗೆ ತೆರಳಿದ ದೃಶ್ಯ ಕಂಡುಬಂತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಡಿವೈಎಸ್ಪಿರವೀಶ್ ಸಿ.ಆರ್. ನಿನ್ನೆ ರಾತ್ರಿಯಿಂದ ಕಲ್ಲಡ್ಕದಲ್ಲಿ ಮೊಕ್ಕಂ ಹೂಡಿ, ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.
ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ, ಪುತ್ತೂರು, ವಿಟ್ಲ ಸಹಿತ ಸ್ಥಳೀಯ ಠಾಣೆಗಳ ಎಸ್ಸೈಗಳನ್ನು ಭದ್ರತೆಗಾಗಿ ಕಲ್ಲಡ್ಕದಲ್ಲಿ ನಿಯೋಜಿಸಲಾಗಿದೆ. ಶನಿವಾರ ಮಧ್ಯಾಹ್ನದ ಬಳಿಕ ಹೆಚ್ಚುವರಿಯಾಗಿ 4 ಪೊಲೀಸ್ ತುಕಡಿಗಳನ್ನು ಕಲ್ಲಡ್ಕಕ್ಕೆ ಕರೆಸಲಾಗಿದ್ದು ಒಟ್ಟು 7 ಪೊಲೀಸ್ ತುಕಡಿಗಳು ಕಲ್ಲಡ್ಕದಲ್ಲಿ ಬೀಡುಬಿಟ್ಟಿವೆ. 207 ವಜ್ರ, ಹೈವೇ ಪಟ್ರೋಲ್ ಸಹಿತ ವಿಶೇಷ ಪೊಲೀಸ್ ತಂಡ ತಾಲೂಕಿನ ಆಯಕಟ್ಟಿನ ಸ್ಥಳಗಳಲ್ಲಿ ಗಸ್ತಿನಲ್ಲಿವೆ.
ಒಂದು ವಾರ ನಿಷೇಧಾಜ್ಞೆ ಜಾರಿ
ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಮೇ 27ರ ಬೆಳಗ್ಗೆ 9ರಿಂದ ಜೂನ್ 2ನೆ ತಾರೀಕಿನವರೆಗೆ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಇದರನ್ವಯ ಸಾರ್ವಜನಿಕ ಸ್ಥಳಗಳಲ್ಲಿ 3 ಮಂದಿಗಿಂತ ಹೆಚ್ಚು ಜನರು ಗುಂಪು ಸೇರುವುದು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.