ಅಂತರ್ಜಲ ಮಟ್ಟ ಅಭಿವೃದ್ದಿಗೆ ಜನರ ಸಹಕಾರ ಅಗತ್ಯ: ಯು.ಟಿ.ಖಾದರ್

Update: 2017-05-27 14:56 GMT

ಕೊಣಾಜೆ, ಮೇ 27: ಇಂದು ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ನಾವು ಜಲ ಸಂರಕ್ಷಣೆಯನ್ನು ಮಾಡಬೇಕಾದರೆ ಅಂತರ್ಜಲದ ಅಭಿವದ್ದಿಗೆ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಆಹಾರ ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು.

   
  ಅವರು ನರಿಂಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೋರ್ಲ ಎಂಬಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂ. ಹಾಗೂ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ದುಡಿಯುವ ಮಹಿಳಾ ಕಾರ್ಮಿಕರಿಗೆ ಅವರ ಸಣ್ಣ ಮಕ್ಕಳಿಗೆ ಕೆಲಸದ ಸ್ಥಳದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ, ಊಟದ ವ್ಯವಸ್ಥೆಯನ್ನು ಕೂಡಾ ಸರಕಾರದ ವತಿಯಿಂದ ಮಾಡಲಾಗುತ್ತಿದೆ. ಅಲ್ಲದೆ ಕೆಲಸ ಮಾಡಿದ 15 ದಿವಸದೊಳಗೆ ಸಂಬಳ ಸಿಗುವಂತಹ ವ್ಯವಸ್ಥೆಯನ್ನು ಕೂಡಾ ಸಮರ್ಪಕವಾಗಿ ಮಾಡಲಾಗಿದೆ ಎಂದರು.
   

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನಡಿಯಲ್ಲಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1000 ಸಾವಿರ ಕಿಂಡಿ ಅಣೆಕಟ್ಟನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಇದರಲ್ಲಿ ಸುಮಾರು 400ರಷ್ಟು ಅಣೆಕಟ್ಟಿನ ಕಾಮಗಾರಿಯು ಪೂರ್ಣಗೊಳ್ಳುತ್ತಾ ಬಂದಿದೆ. ಈ ಯೋಜನೆಯಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟುಗಳ ಪೈಕಿ ನರಿಂಗಾನದಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟನ್ನು ಪ್ರಥಮವಾಗಿ ಉದ್ಘಾಟಿಸಲಾಗಿದೆ ಎಂದರು

ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಅವರು ಮಾತನಾಡಿ, ಇತ್ತೀಚೆಗೆ ಸರಕಾರವು ಬಂಟ್ವಾಳ ಮತ್ತು ಮಂಗಳೂರು ತಾಲೂಕನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವುದು ಆಶ್ಚರ್ಯ ತಂದಿದೆ. ಅಂದರೆ ಇಲ್ಲಿ ಯಥೇಚ್ಚವಾಗಿ ಮಳೆ ಬಂದರೂ ಅದು ಸಮುದ್ರ ಸೇರುತ್ತಿವೆ. ಹಿಂದಿನ ಕಾಲದಲ್ಲಿ ಅಣೆಕಟ್ಟುಗಳ ಮೂಲಕ ನೀರನ್ನು ನಿಲ್ಲಿಸಿ ಸಂರಕ್ಷಿಸುವ ಕೆಲಸ ನಡೆಯುತ್ತಿತ್ತು. ಇದೀಗ ಜಿಲ್ಲಾ ಪಂ.ಎಂದರು.
 ಜಿಲ್ಲಾ ಪಂ. ಸದಸ್ಯೆ ಮಮತಾ ಗಟ್ಟಿ ಮಾತನಾಡಿ ನರಿಂಗಾನ ಮೋರ್ಲದ ಕಿಂಡಿ ಅಣೆಕಟ್ಟು ಕಾಮಗಾರಿಯಲ್ಲಿ ನರೇಗ ಕಾಮಗಾರಿಯಡಿಯಲ್ಲಿ ಮಹಿಳಾ ಕಾರ್ಮಿಕರೇ ದುಡಿದಿರುವುದು ವಿಶೇಷವಾಗಿದೆ. ಈ ಕಿಂಡಿ ಅಣೆಕಟ್ಟಿನಿಂದ ಈ ಭಾಗದ ನೀರಿನ ಮಸ್ಯೆ ಪರಿಹಾರ ಕಾಣಲಿದೆ ಎಂದರು.

ಇದೇ ಸಂದರ್ಭದಲ್ಲಿ ನರಿಂಗಾನ ಗ್ರಾಮದ ಮೊಂಟೆಪದವು ಸರಕಾರಿ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಈ ಭಾರಿಯ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಮಹಮ್ಮದ್ ನೌಷದ್, ತಸ್ಲಿಮಾ, ಪ್ರತಿಜ್ಞಾ ಇವರನ್ನು ಗೌರವಿಸಲಾಯಿತು.

 ಕಾರ್ಯಕ್ರಮದಲ್ಲಿ ತಾಲೂಕು ಪಂ. ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ತಾಲೂಕು ಪಂ. ಸದಸ್ಯ ಹೈದರ್ ಕೈರಂಗಳ, ನರಿಂಗಾನ ಗ್ರಾಮ ಪಂ. ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಬಾಳೆಪುಣಿ ಗ್ರಾಮ ಪಂ. ಅಧ್ಯಕ್ಷೆ ಲೀಲಾವತಿ, ಇರಾ ಗ್ರಾಮ ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಅಬ್ದುಲ್ ಜಲೀಲ್ ಮೋಂಟುಗೋಳಿ, ಸಿ.ಎಂ.ಶೆರೀಪ್, ಪದ್ಮನಾಭ ನರಿಂಗಾನ, ಮಹಮ್ಮದ್ ಅಸೈ, ಜನಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಪಿಡಿಒ ನಳಿನಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News