ರಸ್ತೆ ಬದಿ ಮೂತ್ರ ಮಾಡಿದ್ದನ್ನು ಆಕ್ಷೇಪಿಸಿದ ವ್ಯಕ್ತಿಯ ಥಳಿಸಿ ಕೊಲೆ

Update: 2017-05-28 15:01 GMT

ದಿಲ್ಲಿ, ಮೇ 28: ರಸ್ತೆ ಬದಿ ನಿಂತು ಮೂತ್ರ ಮಾಡುತ್ತಿರುವುದನ್ನು ಆಕ್ಷೇಪಿಸಿದ ವ್ಯಕ್ತಿಯೋರ್ವನನ್ನು ಥಳಿಸಿ ಕೊಲೆಗೈದ ಘಟನೆ ಉತ್ತರ ದಿಲ್ಲಿಯ ಜಿಟಿಬಿ ನಗರದಲ್ಲಿ ಶನಿವಾರ ನಡೆದಿದೆ.

  ಜಿಟಿಬಿ ನಗರ ಮೆಟ್ರೋ ಸ್ಟೇಷನ್ ಬಳಿ ಎರಡ್ಮೂರು ಯುವಕರು ರಸ್ತೆ ಬದಿ ಮೂತ್ರ ಮಾಡುತ್ತಿದ್ದರು. ಈ ಸಂದರ್ಭ ಅಲ್ಲೇ ಬಳಿಯಲ್ಲಿ ರಿಕ್ಷಾ ನಿಲ್ಲಿಸಿದ್ದ 32ರ ಹರೆಯದ ರವೀಂದರ್ ಎಂಬ ವ್ಯಕ್ತಿ ಇದನ್ನು ಆಕ್ಷೇಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು ಯುವಕರು , ತಮ್ಮ ಸ್ನೇಹಿತರೊಂದಿಗೆ ವಾಪಾಸು ಬಂದು ವಿಚಾರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿ ತೆರಳಿದ್ದಾರೆ. ಅದರಂತೆ ರಾತ್ರಿ 8ರ ಸುಮಾರಿಗೆ ಸುಮಾರು 15ರಷ್ಟು ಮಂದಿ ಗುಂಪುಕಟ್ಟಿಕೊಂಡು ಬಂದು ರವೀಂದರ್ ಮೇಲೆ ಕಬ್ಬಿಣದ ರಾಡ್‌ನಿಂದ ಮತ್ತು ಬಟ್ಟೆಯಲ್ಲಿ ಕಲ್ಲು ಕಟ್ಟಿ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ರವೀಂದರ್‌ನನ್ನು ಅಲ್ಲೇ ಬಿಟ್ಟು ತೆರಳಿದೆ. ಬಳಿಕ ರವೀಂದರ್ ತನ್ನ ಸೋದರನಿಗೆ ಕರೆ ಮಾಡಿದ್ದು , ಆತ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹಲ್ಲೆ ನಡೆಸಿದವರ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News