ಮುಲ್ಕಿ ನೂರ್ ಮುಹಮ್ಮದ್ ನಿಧನ
ಮುಲ್ಕಿ, ಮೇ 29: ಮುಲ್ಕಿ ಬಪ್ಪಬ್ಯಾರಿ ವಂಶಸ್ಥರಾಗಿದ್ದ ಹಿರಿಯ ಕಾಂಗ್ರೆಸ್ ಧುರೀಣ ಮೂಲ್ಕಿ ನೂರ್ ಮುಹಮ್ಮದ್ (89) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮುಲ್ಕಿಯ ಸ್ವಗೃಹ ಬೊಟ್ಟು ಹೌಸ್ನಲ್ಲಿ ನಿಧನರಾದರು.
ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಹಿರಿಯ ಕಾಂಗ್ರೆಸ್ ಧುರೀಣರಾಗಿದ್ದ ನೂರ್ ಮುಹಮ್ಮದ್ ಧೀರ್ಘ ಕಾಲದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸದಸ್ಯರಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಧೀಮಂತ ವ್ಯಕ್ತಿಯಾಗಿದ್ದರು.
ಅವರು ಮುಲ್ಕಿ ಶಾಫಿ ಜುಮಾ ಮಸೀದಿಯ ಧೀರ್ಘ ಕಾಲೀನ ಅಧ್ಯಕ್ಷರಾಗಿ, ಕಾರ್ನಾಡು ಮಸ್ಜಿದೇ ನೂರ್ ಇದರ ಸ್ಥಾಪಕರಾಗಿ ಮುಸ್ಲಿಂ ಸಮಾಜದ ಮುಖಂಡರಾಗಿ ಸೇವೆ ಸಲ್ಲಿಸಿದ್ದಾರೆ.
ಸಮಾಜಿಕ ಕಾರ್ಯ: ಇವರು ಮುಲ್ಕಿ ಲಯನ್ಸ್ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಸಂಪುಟದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಯಾಗಿದ್ದರು. ಇವರು ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ನೀಡಿದ್ದಾರೆ.
ಇಂಡಸ್ಟ್ರೀಯಲ್ ಕೊ ಅಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ, ಮಂಗಳೂರು ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾಗಿ, ಮುಲ್ಕಿ ಪುರಸಭಾ ಸದಸ್ಯರಾಗಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾಗಿ, ಮೂಲ್ಕಿ ಟೌನ್ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಂತಾಪ: ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಮೀನುಗಾರಿಕಾ ಸಚಿವ ಪ್ರಮೋದ್ ಮದ್ವರಾಜ್, ಶಾಸಕ ಅಯಚಂದ್ರ ಜೈನ್, ಶಾಸಕ ವಿನಯ ಕುಮಾರ್ ಸೊರಕೆ, ಕ.ಸಾ.ಪ. ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವಾ, ಸಮಾಜ ಸೇವಕ ಸಾಧು ಅಂಚನ್ ಮಟ್ಟು, ಮುಲ್ಕಿ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹಮ್ಮದ್ ಸಂತಾಪ ಸೂಚಿಸಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಮುಲ್ಕಿ ಶಾಫಿ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಸಮೀಪ ಸಂಬಂಧಿ ಇನಾಯತ್ ಅಲಿ ಮುಲ್ಕಿ ತಿಳಿಸಿದ್ದಾರೆ.