ನೆಲ್ಲಿಕಾರು: ರಸ್ತೆ ಅಪಘಾತ; ಇಬ್ಬರು ಮೃತ್ಯು, ಇಬ್ಬರಿಗೆ ಗಾಯ

Update: 2017-05-29 17:14 GMT

ಮೂಡಬಿದಿರೆ, ಮೇ 29: ಆಲ್ಟೋ ಕಾರು ಹಾಗೂ ಖಾಸಗಿ ಬಸ್ಸಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆ ನೆಲ್ಲಿಕಾರು ಪಿವಿ ನಿಲಯದ ಬಳಿ ಇಂದು ನಡೆದಿದೆ.

 ಪೂಂಜಾಲಕಟ್ಟೆ ಕುರ್ಯೋಡಿ ಮಠ ಪರಿಸರದ ಜಯಂತ ಭಟ್ ಅವರ ಪತ್ನಿ ವಸಂತಿ ಭಟ್ (40) ಹಾಗೂ ಸುಜಾತ (80) ಘಟನೆಯಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪೂಂಜಾಲಕಟ್ಟೆಯಿಂದ ನಾರಾವಿ ಮಾರ್ಗವಾಗಿ ಶೃಂಗೇರಿಗೆ ಪ್ರಯಾಣ ಬೆಳೆಸಿದ್ದ ಕುಟುಂಬ ಸದಸ್ಯರು ಹಾಗೂ ಒಬ್ಬಾಕೆ ನೆರೆಮನೆಯ ಮಹಿಳೆಯಿದ್ದ ಆಲ್ಟೋ ಕಾರು ರಾಜ್ಯ ಹೆದ್ದಾರಿಯ ನೆಲ್ಲಿಕಾರು ಪಿವಿ ನಿಲಯದ ಬಳಿ ತಿರುವಿನಲ್ಲಿ ಬರುತ್ತಿದ್ದಂತೆ ಕಾರ್ಕಳದಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ.

ಈ ಸಂದರ್ಭ ಕಾರನ್ನು ಜಯಂತ ಭಟ್ ಚಲಾಯಿಸುತ್ತಿದ್ದು, ಅವರ ಸೊಂಟಕ್ಕೆ ಗಾಯಗಳಾಗಿವೆ. ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಂತ್ ಭಟ್ ತಾಯಿ ಜಲಜಮ್ಮ (80) ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಸಾಗಿಸಲಾಗಿದೆ.

ಜಯಂತ್ ಪುತ್ರ ಸುಕೇಶ್ ಭಟ್, ಇನ್ನೋರ್ವ ಪುತ್ರ ಸಂದೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸುಜಾತ ಅವರ ಸಹೋದರ ವಾಸುದೇವ ಮೂಡಬಿದಿರೆ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News