×
Ad

ಬಂಟರ ಭವನದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ

Update: 2017-05-30 20:57 IST

ಪುತ್ತೂರು, ಮೇ 30: ‘ನಮ್ಮ ತುಳುನಾಡ್ ಟ್ರಸ್ಟ್ ಕುಡ್ಲ’ ಎಂಬ ಸಂಸ್ಥೆಯು ಪುತ್ತೂರಿನಲ್ಲಿ ಮುಂಬರುವ 2019ರಲ್ಲಿ ‘ವಿಶ್ವ ತುಳು ಉಚ್ಚಯ’ ಎಂಬ ಹೆಸರಿನಲ್ಲಿ ತುಳು ಸಮ್ಮೇಳನ ನಡೆಸಲು ಇಚ್ಛಿಸಿದ್ದು, ಈ ವಿಶ್ವ ತುಳು ಸಮ್ಮೇಳನ ನಡೆಸುವ ಕುರಿತು ಮಂಗಳವಾರ ಪುತ್ತೂರಿನ ಬಂಟರ ಭವನದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆಯು ಟ್ರಸ್ಟ್‌ನ ಗೌರವಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್, ಸಂಚಾಲಕಿ ವಿದ್ಯಾಶ್ರೀ, ಅಧ್ಯಕ್ಷ ಕಡಬ ದಿನೇಶ್ ರೈ ಅವರು ಸಮ್ಮೇಳನದ ರೂಪುರೇಶೆಗಳ ಕುರಿತು ಮಾಹಿತಿ ನೀಡಿದರು.

ಮೂಲ್ಕಿ, ಉಜಿರೆ, ಒಡಿಯೂರು, ಅಡ್ಯಾರ್, ಬದಿಯಡ್ಕ ಮುಂತಾದ ಕಡೆ ತುಳು ಸಮ್ಮೇಳನಗಳು ಈಗಾಗಲೇ ನಡೆದಿರುವ ಕಾರಣ 2019ರಲ್ಲಿ ಪುತ್ತೂರಿನಲ್ಲಿ ಸಮ್ಮೇಳನ ನಡೆಸಲು ಯೋಚಿಸಲಾಗುತ್ತಿದೆ. ಪುತ್ತೂರಿನಲ್ಲಿ ಸಮಾವೇಶ ನಡೆಯುವ ಕಾರಣ ಪ್ರಾರಂಭಿಕ ಸಮಾಲೋಚನಾ ಸಭೆಯನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಮೂಲ ರೂಪುರೇಶೆ ಸಿದ್ಧವಾದರೆ ನಂತರ ಇತರ ಕಡೆ ಸಭೆ ನಡೆಸಲು ಸುಲಭವಾಗುತ್ತದೆ ಎಂದು ಕಡಬ ದಿನೇಶ್ ರೈ ಅವರು ತಿಳಿಸಿದರು.  

ಒಂದು ದಿನ ಪೊಂಜೊವೆಲೆನ ಆಯನ, ಇನ್ನೊಂದು ದಿನ ಜೋಕುಲೆನ ಆಯನ, ಮತ್ತೊಂದು ದಿನ ಜನಪದ ಕ್ರೀಡಾ ಆಯನ, ಮತ್ತೊಂದು ದಿನ ಜನಪದ ಕಲಾ ಆಯನ ಹೀಗೆ ಒಟ್ಟು ಏಳು ದಿನಗಳ ಹಬ್ಬ ನಡೆಸುವುದು ನಮ್ಮ ಆಶಯವಾಗಿದೆ, ಸಮ್ಮೇಳನ ನಡೆಸುವ ನಿಟ್ಟಿನಲ್ಲಿ ಗ್ರಾಮ, ವಲಯ, ತಾಲ್ಲೂಕು, ಜಿಲ್ಲೆ ಮತ್ತು ಹೊರನಾಡು ಮಟ್ಟಗಳಲ್ಲಿ ನಾನಾ ಸಮಿತಿಗಳನ್ನು ರಚಿಸುವ ಉ್ದೇಶವಿದೆ ಎಂದು ಅವರು ತಿಳಿಸಿದರು.

 ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಆಡಳಿತ ಮಂಡಳಿಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅವರು ಮಾತನಾಡಿ, ಏಳು ದಿನಗಳ ಸಮ್ಮೇಳನದ ಆಶಯವೇನೋ ಉತ್ತಮ. ಆದರೆ ಈ ಸಭೆಯಲ್ಲಿ ಅದನ್ನು ನಿರ್ಣಯಿಸುವಂತಿಲ್ಲ. ಅಷ್ಟು ದೊಡ್ಡ ಮಟ್ಟದ ಸಮ್ಮೇಳನ ನಡೆಸಬೇಕಾದರೆ ಅದಕ್ಕೆ ಅಗಾಧವಾದ ಕೆಲಸಗಳು ನಡೆಯಬೇಕು. ಹೀಗಾಗಿ ಸಮಾವೇಶದ ಬಗ್ಗೆ ಯಾವುದೇ ನಿರ್ಣಯ ಇಂದು ಕೈಗೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಮೊದಲು ಸಮಾಜದ ಎಲ್ಲ ಸ್ತರದ, ಎಲ್ಲ ಜಾತಿ, ಧರ್ಮಗಳ ತುಳುವರ ಪ್ರಾತಿನಿಧಿಕ ಸಂಸ್ಥೆಗಳನ್ನು ಒಟ್ಟು ಸೇರಿಸಿ ಅವರೆಲ್ಲರ ಅಭಿಪ್ರಾಯ, ಒಪ್ಪಿಗೆ ಪಡೆದು ಮುಂದುರಿಯಬೇಕೆಂದು ಸಲಹೆಯಿತ್ತರು.
 

ಏಳು ದಿನಗಳ ಸಮ್ಮೇಳನ ನಡೆಸಲು ಸಾಧ್ಯವೇ ಎಂಬ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹರಿಕೃಷ್ಣ ಪುನರೂರು ಅವರು ಹೇಳಿದರು.
   

ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ, ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ಪುತ್ತೂರು ವರ್ತಕ ಸಂಘದ ಅಧ್ಯಕ್ಷರಾದ ಸಾಂಸ್ಕೃತಿಕ ಸಂಘಟಕ ಭಾಸ್ಕರ ಬಾರ್ಯ, ರಂಗಕರ್ಮಿ ಚಿದಾನಂದ ಕಾಮತ್ ಕಾಸರಗೋಡು, ಸಾಂಸ್ಕೃತಿಕ ಸಂಘಟಕ ನಿರಂಜನ ರೈ ಮಠಂತಬೆಟ್ಟು, ಕಲಾ ಸಂಘಟಕರಾದ ಎಪಿಎಂಸಿ ನೂತನ ನಿರ್ದೇಶಕ ಬೂಡಿಯಾರ್ ರಾಧಾಕೃಷ್ಣ ರೈ, ರವಿಪ್ರಸಾದ್ ಶೆಟ್ಟಿ, ಸಮಾಜ ಸೇವಾ ಕಾರ್ಯಕರ್ತೆ ಹರಿಣಾಕ್ಷಿ ಜೆ. ಶೆಟ್ಟಿ, ಮಹಾಬಲ ರೈ, ರಾಕೇಶ್ ರೈ ಕೆಡೆಂಜಿ, ಲೋಕೇಶ್ ಹೆಗ್ಡೆ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವಮಟ್ಟದ ತುಳು ಸಮ್ಮೇಳನ ನಡೆಸುವುದಿದ್ದರೆ ಅದು ಎಲ್ಲ ಜಾತಿ, ಸಮುದಾಯ, ಧರ್ಮಗಳ ಜನರನ್ನು ಸೇರಿಸಿಕೊಂಡು ಮಾಡುವಂತಿರಬೇಕು. ಆ ಮಟ್ಟದಲ್ಲಿ ಮಾಡುವುದಿದ್ದರೆ ಬೃಹತ್ ಮೊತ್ತದ ಹಣಕಾಸಿನ ವ್ಯವಸ್ಥೆಯೂ ಬೇಕು. ಕೇವಲ ಸಮಿತಿಯೊಂದನ್ನು ರಚಿಸಿ ಅದರ ಸದಸ್ಯರೆಲ್ಲರೂ ಒಂದಷ್ಟು ಹಣ ನೀಡಿ ಎಂದು ಹೇಳುವಂತಿರಬಾರದು. ಎಲ್ಲ ಜಾತಿಗಳ ಸಂಘಟನೆಗಳನ್ನು, ಎಲ್ಲ ಬಗೆಯ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಸರ್ವರನ್ನೂ ಸೇರಿಸಿಕೊಂಡು ಒಂದು ಸಮಾಲೋಚನೆ ನಡೆಸಿ, ಅಲ್ಲಿ ಸಂಗ್ರಹವಾದ ಅಭಿಪ್ರಾಯಗಳನ್ನು ಪಡೆದುಕೊಂಡು ಮುಂದಡಿ ಇಡುವುದು ಉತ್ತಮ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News