‘ರಾ. ಬಾಲಸುರಕ್ಷಾ ಕಾರ್ಯಕ್ರಮ ಕಟ್ಟುನಿಟ್ಟಾಗಿ ಜಾರಿಗೊಳಿಸಿ’ ಜಿಲ್ಲಾಧಿಕಾರಿ ಪ್ರಿಯಾಂಕ ಸೂಚನೆ
ಉಡುಪಿ, ಜೂ.1: ರಾಷ್ಟ್ರೀಯ ಬಾಲಸುರಕ್ಷಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶಾಲೆ ಮತ್ತು ಅಂಗನವಾಡಿ ಕೇಂದ್ರ ಗಳಿಗೆ ವೈದ್ಯಕೀಯ ತಂಡ ಭೇಟಿ ನೀಡುವ ವೇಳಾಪಟ್ಟಿಯನ್ನು ಮೊದಲೇ ಸಂಬಂಧಪಟ್ಟವರಿಗೆ ತಿಳಿಸಿ. ಈ ಸಂಬಂಧ ಗೂಗಲ್ ಕ್ಯಾಲೆಂಡರ್ನಲ್ಲಿ ವೇಳಾಪಟ್ಟಿ ಪ್ರಕಟಿಸಿ ಅಂಗನವಾಡಿ ಮೇಲ್ವಿಚಾರಕಿಯರಿಗೆ ನೆನಪಿಸಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಆರೋಗ್ಯ ಇಲಾಖೆಗೆ ಸಂಬಂಧಿಸಿದ 15 ವಿಭಾಗಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಎಲ್ಲ ಅಂಗನವಾಡಿ ಮೇಲ್ವಿಚಾರಕಿಯರ ಬಳಿ ಟ್ಯಾಬ್ಲೆಟ್ ಇದ್ದು, ಅವರಿಗೆ ಆನ್ಲೈನ್ ರಿಮೈಂಡರ್ ಕಳುಹಿಸಿ. ವರ್ಷಾರಂಭದಲ್ಲೇ ವೇಳಾಪಟ್ಟಿ ನಿಗದಿಪಡಿಸಿ ಮಾಹಿತಿ ನೀಡಿ, ಮಕ್ಕಳ ಆರೋಗ್ಯಕ್ಕೆ ಪೂರಕವಾದ ಕಾರ್ಯಕ್ರಮಗಳು ಶೇ.ನೂರು ಸಾಧನೆ ಯಾಗುವಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಾಂಗಣದಲ್ಲಿ ಗುರುವಾರ ನಡೆದ ಆರೋಗ್ಯ ಇಲಾಖೆಗೆ ಸಂಬಂಧಿಸಿದ 15ವಿಭಾಗಗಳ ಪ್ರಗತಿ ಪರಿಶೀಲನೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಳೆದ ಸಾಲಿನಲ್ಲಿ 2516 ಮಕ್ಕಳ ಆರೋಗ್ಯ ಪರೀಕ್ಷೆಯನ್ನು ನಡೆಸಿ 784 ಮಕ್ಕಳಿಗೆ ಬಾಲಸುರಕ್ಷಾ ಯೋಜನೆಯಡಿ ನೆರವು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ಮಾದರಿಯಲ್ಲಿ ಮುಟ್ಟಿನ ನೈರ್ಮಲ್ಯದ ಕುರಿತು ಜಿಲ್ಲೆಯ 110 ಸರಕಾರಿ ಶಾಲೆಗಳ ಹೆಣ್ಮಕ್ಕಳಿಗೆ ಸಮಗ್ರ ಮಾಹಿತಿಯನ್ನು ನೀಡಲು ವಿದ್ಯಾಂಗ ಉಪನಿರ್ದೇಶಕರು ಮತ್ತು ಸಂಬಂಧಪಟ್ಟ ವೈದ್ಯರಿಗೆ ನಿರ್ದೇಶನ ನೀಡಿದರು.
ಕಳೆದ ಸಾಲಿನಲ್ಲಿ ಕುಂದಾಪುರದ ಐದು ಪ್ರೌಢಶಾಲೆಗಳ 260 ವಿದ್ಯಾರ್ಥಿನಿ ಯರಿಗೆ ಮಾಹಿತಿ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಕರಪತ್ರಗಳಲ್ಲಿ ಮುದ್ರಿಸಿ ಜಿಲ್ಲೆಯಾದ್ಯಂತ ಮುಂದುವರಿಸಲಾಗುವುದು ಎಂದು ಇಲಾಖೆಯ ಅಧಿಕಾರಿ ವಿವರಿಸಿದರು.
ಏಡ್ಸ್ ಇಳಿಮುಖ:
ಜಿಲ್ಲೆಯಲ್ಲಿ ಏಡ್ಸ್ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. 2008ರಲ್ಲಿ ಶೇ.7.90 ಇದ್ದ ಕಾಯಿಲೆ, 2016ಕ್ಕೆ ಶೇ. 1.25ಕ್ಕೆ ಇಳಿದಿದೆ ಎಂದು ಡಾ.ಚಿದಾನಂದ ವಿವರಿಸಿದರು. ಅದೇ ರೀತಿ ತಾಯಿಯಿಂದ ಮಕ್ಕಳಿಗೆ ಏಡ್ಸ್ ಹರಡುವಿಕೆ ಕಡಿಮೆಯಾಗಿದ್ದು, ಎಚ್ಐವಿ ಪೀಡಿತ ಅಮ್ಮಂದಿರ 197 ಹೆರಿಗೆಯಲ್ಲಿ 178 ಮಕ್ಕಳಿಗೆ 18 ತಿಂಗಳು ದಾಟಿದ್ದು ಈ ಮಕ್ಕಳಲ್ಲಿ ಕಾಯಿಲೆಯ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಟಿಬಿ, ಕುಷ್ಠರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡಾಗುತ್ತಿದೆ ಎಂದವರು ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ ನಾರ್ಕೊಟಿಕ್ ಡ್ರಗ್ಸ್ ಹಾವಳಿ ತಡೆಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಿ ಎಂದು ಜಿಲ್ಲಾಧಿಕಾರಿಗಳು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು
ಕಳೆದ ಮೂರು ತಿಂಗಳಿಂದ ರಕ್ತಕ್ಕೆ ಬದಲಿ ರಕ್ತವನ್ನು ಆಸ್ಪತ್ರೆಗಳಲ್ಲಿ ಪಡೆಯುತ್ತಿಲ್ಲ. ಜಿಲ್ಲೆಯ ಜಿಲ್ಲಾಸ್ಪತ್ರೆ, ಕೆಎಂಸಿ ಮತ್ತು ಕುಂದಾಪುರದಲ್ಲಿ ರೆಡ್ಕ್ರಾಸ್ನ ಬ್ಲಡ್ಬ್ಯಾಂಕ್ಗಳಿದ್ದು, ಬದಲಿ ರಕ್ತವನ್ನು ಆಸ್ಪತ್ರೆಯಲ್ಲಿ ಕೇಳುತ್ತಿಲ್ಲ. ಕೇಳುವಂತೆ ಯೂ ಇಲ್ಲ ಎಂದು ಡಾ.ಚಿದಾನಂದ ಸಭೆಗೆ ಮಾಹಿತಿ ನೀಡಿದರು.
ಡೆಂಗ್ ಹರಡುವಿಕೆ ವರದಿಯಾಗುತ್ತಿದ್ದು, ಪೀಡಿತ ಪ್ರದೇಶಗಳಲ್ಲಿ ಇಲಾಖೆ ಹೆಚ್ಚಿನ ಗಮನ ನೀಡಿ ಕಾರ್ಯೋನ್ಮುಖವಾಗಿದೆ. ಜನರಿಗೆ ಮಾಹಿತಿಯನ್ನು ನೀಡಿ, ತಡೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ ಎಚ್1ಎನ್1ನಿಂದ ಒಟ್ಟು 4 ಸಾವುಗಳನ್ನು ಜನವರಿ ಯಿಂದ ಮೇ ತಿಂಗಳವರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದರು. ಕೋಟ್ಪಾ ಅನುಷ್ಠಾನದಲ್ಲಿ ಜಿಲ್ಲೆ ಉತ್ತಮ ಸಾಧನೆ ದಾಖಲಿಸಿದ್ದು, ಶಾಲೆಗಳ ನೂರು ಮೀ.ವ್ಯಾಪ್ತಿಯಲ್ಲಿ ಗೂಡಂಗಡಿಗಳಲ್ಲಿ ಯಾವುದೇ ಅಮಲು ಪದಾರ್ಥ ಲಭ್ಯವಿಲ್ಲ ಎಂದೂ ಅಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಪುನರ್ವಸತಿಗಾಗಿ ಕಾರ್ಕಳ ಮತ್ತು ಚಾರಾದಲ್ಲಿ ಉಪವಿಭಾಗಾಧಿಕಾರಿಗಳು ಜಾಗವನ್ನು ಗುರುತಿಸಿದ್ದು, ಡಿಎಚ್ಒ ಅವರು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಅದೇ ರೀತಿ ಮಾಸಾಶನ ಪಡೆಯುವವರಿಗೆ ಮನೆಗೆ ತೆರಳಿ ಆಧಾರ್ ಸೇರ್ಪಡೆಗೊಳಿಸಿ ಎಂದರಲ್ಲದೆ, ಅವರಿಗೆ ಅಗತ್ಯ ವಾಟರ್ಬೆಡ್ಗಳನ್ನು ಒದಗಿಸಲು ಸೂಚಿಸಿದರು.
ಗ್ರಾಮೀಣ ಸಮುದಾಯ ಮಟ್ಟದಲ್ಲಿ ಡಯೇರಿಯಾ ತಡೆಗೆ ಒಆರ್ಎಸ್ ನೀಡಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಆರ್ಸಿಹೆಚ್ ವೈದ್ಯ ಡಾ. ರಾಮ, ಇದರಲ್ಲಿ ಬೇಧಿಯಾಗುವ ವೇಳೆ ಮಕ್ಕಳಿಗೆ ಸಕ್ಕರೆ ನೀರು ಕುಡಿಸ ಬೇಕೆಂಬ ಅರಿವು ನೀಡುವ ಕಾರ್ಯವೂ ಅಡಕವಾಗಿದೆ ಎಂದರು
ಮಕ್ಕಳಿಗೆ ಶಾಲೆಗಳಲ್ಲಿ ಕೈತೊಳೆಯುವ ವಿಧಾನವನ್ನು ತೋರಿಸಲು ಹಾಗೂ ಶಾಲೆಗಳಲ್ಲಿ ನೀರು ಶೇಖರಿಸುವ ಸ್ಥಳಗಳ ಸ್ವಚ್ಛತೆ ಕಾಯ್ದುಕೊಳ್ಳಲು ಗ್ರಾಪಂ ನೆರವಿಗಾಗಿ ಆೋಗ್ಯ ಇಲಾಖೆ ಕೋರಿಕೆ ಸಲ್ಲಿಸಿತು.
ಜಿಲ್ಲೆಯಲ್ಲಿ 2016ರಿಂದ 17ರವರೆಗೆ ಆರು ತಾಯಿ ಮರಣ ಮತ್ತು 31 ಶಿಶುಮರಣ ಸಂಭವಿಸಿದ್ದು, ಈ ಬಗ್ಗೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಅನುದಾನದ ನೆವದಿಂದ ಯಾವುದೇ ತಾಯಿ ಮರಣ ಸಂಭವಿಸಬಾರದು ಎಂಬ ಎಚ್ಚರಿಕೆ ಯನ್ನು ನೀಡಿದರಲ್ಲದೆ ಪ್ರತಿಯೊಂದು ತಾಯಿ ಮತ್ತು ಮಗುವಿನ ಆರೋಗ್ಯ ಇಲಾಖೆ ಹೊಣೆ. ಇದರಲ್ಲಿ ನಿರ್ಲಕ್ಷ್ಯ ಸಲ್ಲದು ಎಂದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸುವುದಾಗಿ ಪ್ರಿಯಾಂಕ ಹೇಳಿದರು. ಸಭೆಯಲ್ಲಿ ಜಿಲ್ಲೆಯ ವೈದ್ಯರು, ಜಿಲ್ಲಾಸ್ಪತ್ರೆಯ ಸರ್ಜನ್, ಕೆಎಂಸಿ ವೈದ್ಯರು ಉಪಸ್ಥಿತರಿದ್ದರು.